ರಾಯಬಾಗ : ರಾಜ್ಯದಲ್ಲಿ ಮುಡಾ ಭೂ ಹಗರಣಗಳ ಸುದ್ದಿ ಸದ್ದು ಮಾಡುತ್ತಿದ್ರೆ, ಇತ್ತ ಹಾರೂಗೇರಿಯಲ್ಲಿ ಮಾಜಿ ಶಾಸಕ ಪಿ ರಾಜೀವ್ ಭೂ ಹಗರಣದ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ರಾಯಬಾಗ ತಾಲೂಕಿನ ಹಾರೂಗೇರಿ ಪುರಸಭೆ ವ್ಯಾಪ್ತಿಯ 2 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿಕೊಂಡಿರುವ ಬಗ್ಗೆ ಶಾಸಕ ಪಿ.ರಾಜೀವ ಸಾಕ್ಷಿ ಸಮೇತ ಅಕ್ರಮ ಭೂ ಹಗರಣದ ಆರೋಪ ಮಾಡಿದ್ದಾರೆ.
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ತಮ್ಮ ಗ್ರಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಹಾರಾಷ್ಟ್ರ ಮೂಲದ ವಿನೋದ ಸಾತಾರಕರ ಎಂಬ ವ್ಯಕ್ತಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಹಾರೂಗೇರಿ ಪಟ್ಟಣದ ಕೆ ಎಸ್ ಆರ್ .ಟಿ.ಸಿ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಉಪ ಕೃಷಿ ಮಾರುಕಟ್ಟೆಯ ಸರ್ವೆ ನಂ 9/2, 9/3 ರಲ್ಲಿರುವ ತಲಾ ಒಂದೊಂದು ಎಕರೆಯಂತೆ ಒಟ್ಟು 2 ಎಕರೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಖರೀದಿಸಿದ್ದಾರೆ. ಆರ್.ಟಿ.ಸಿ. ಉತಾರ ಕೂಡಾ ಲಭ್ಯವಿದ್ದು, ಇತರೆ ದಾಖಲೆಗಳಲ್ಲಿ ಎಪಿಎಂಸಿ ಆಡಳಿತ ಮಂಡಳಿಯವರು ಸಹಿ ಮಾಡಿ ಮಾರಾಟ ಮಾಡಿರುವುದಾಗಿ ಪಿ.ರಾಜೀವ್ ಕಿಡಿಕಾರಿದರು.
ಅಕ್ರಮವಾಗಿ ಖರೀದಿಸಿದ ಜಾಗವನ್ನು ಸದ್ದಿಲ್ಲದೆ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಸುತ್ತಲು ಇರುವ ತಡೆಗೋಡೆಯನ್ನು ಅಲ್ಲಲ್ಲಿ ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ . ಹಾರೂಗೇರಿ ತಾಲೂಕಾ ಕೇಂದ್ರವಾಗಲು ಇಂತಹ ಸರ್ಕಾರಿ ಜಾಗಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಿದೆ.
ಸರ್ಕಾರದ ಜಾಗ ಲೂಟಿ ಮಾಡುತ್ತಿರುವವರ ವಿರುದ್ಧ ಸ್ಥಳೀಯರು, ರೈತ ಸಂಘಗಳು, ಮಹಿಳಾ ಸಂಘಟನೆಗಳು, ಸಂಘ ಸಂಸ್ಥೆಗಳು, ಪುರಸಭೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ಬುದ್ದಿ ಜೀವಿಗಳು ಸರಕಾರಿ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಒಗ್ಗಟ್ಟಿನ ಹೋರಾಟದ ಅವಶ್ಯಕತೆ ಇದೆ ಎಂದರು.
ವರದಿ: ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ
PublicNext
22/10/2024 07:29 pm