ಗದಗ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಸಹಕಾರ ಇಲಾಖೆ, ಗದಗ ಹಾಗೂ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಕಾರ್ಯಾಗಾರ ಅಡರಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಜರುಗಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರು ಅಡಕರಕಟ್ಟಿ ಪ್ಯಾಕ್ಸ್ ಸಹಕಾರ ಸಂಘದಲ್ಲಿ ಬರಗಾಲದಲ್ಲಿಯೂ ಕೂಡಾ ೧೨ ಕೋಟಿ ರೂಪಾಯಿಗಳಷ್ಟು ಡಿಪಾಜಿಟ್ ಹೊಂದಿದೆ. ಸತತ ೩೦ ವರ್ಷಗಳಿಂದ ಲಾಭದಲ್ಲಿದೆ. ೨೫ ವರ್ಷಗಳಿಂದ ರೈತರಿಗೆ ೮% ಡಿವಿಡೆಂಡ್ ಕೊಡುತ್ತಾ ಬಂದಿದ್ದು ಗದಗ ಜಿಲ್ಲೆಗೆ ಮಾದರಿಯಾಗಿದೆ. ಸಂಘದಲ್ಲಿ ರೈತರಿಗೆ ಬೇಕಾಗುವ ಕೃಷಿ ಪರಿಕರ, ಗೊಬ್ಬರ, ಬೀಜಗಳನ್ನು ಸಕಾಲಕ್ಕೆ ಒದಗಿಸುತ್ತಾ ಬಂದಿದೆ. ನಮ್ಮ ದೇಶದಲ್ಲಿ ಸಹಕಾರ ಚಳವಳಿ ಗ್ರಾಮೀಣರ ಅಭಿವೃಧ್ಧಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ. ಸಹಕಾರ ಸಂಘಗಳ ಮುಖಾಂತರ ನಾವಿಂದು ರೈತಾಪಿ ವರ್ಗದವರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಕೃಷಿ ಸಾಲ, ರಾಸಾಯನಿಕ ಗೊಬ್ಬರ, ಪಡಿತರ ಧಾನ್ಯ, ಬಿತ್ತನೆ ಬೀಜ, ಕೃಷಿ ಸಲಕರಣೆಗಳನ್ನು ಪೂರೈಸುವ ಹಾಗೂ ಜನೌಷಧಿ ಕೇಂದ್ರ ತೆರೆಯುವ ಮೂಲಕ ರೈತಾಪಿ ವರ್ಗದವರ ಸ್ವಾವಲಂಬಿ ಬದುಕಿನ ಆಶಾಕಿರಣವಾಗಿದೆ. ಕೆ.ಸಿ.ಸಿ. ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಒಟ್ಟು ೫೩೬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಇವುಗಳು “ರೈತರಿಗೆ ಬೇಸಾಯಕ್ಕೆ ಬೇಕಾದ ಎಲ್ಲ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಿ ಆರ್ಥಿಕವಾಗಿ ಸಬಲರನ್ನಾಗಿಸುವುದು ಗುರಿಯಾಗಿದೆ” ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚನ್ನಬಸಪ್ಪ ಹಳೇಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ವ್ಹಿ. ಪಾಟೀಲ ಮಾತನಾಡಿದರು. ಅಡರಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಂತೇಶ ಬಿ. ಹವಳದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ. ವ್ಹಿ. ಪಾಟೀಲ, ಎಚ್.ಎ. ಬಂಡೆಣ್ಣವರ, ಬಿ.ಆರ್. ನಿಡಗುಂದಿ, ಕೆ. ಸಿ. ಕೂಸನೂರಮಠ, ವಿ.ವಿ ಪಡಸಲಗಿ, ವಿಶ್ವನಾಥ ಎಚ್. ಲಮಾಣಿ ಉಪಸ್ಥತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿನಾಯಕ ಎಚ್. ನಿರಂಜನ್, ಡಾ.ಪ್ರವೀಣ ಕರಿಕಟ್ಟಿ, ವ್ಹಿ.ಜಿ. ಕುಲಕರ್ಣಿ ಉಪನ್ಯಾಸ ನೀಡಿದರು. ಚಂದ್ರಶೇಖರ ಕರಿಯಪ್ಪನವರ, ನಿಂಗನಗೌಡ ಪಾಟೀಲ ನಿರ್ವಹಿಸಿದರು.
Kshetra Samachara
21/10/2024 12:20 pm