ನರಗುಂದ: ನರಗುಂದ ತಾಲ್ಲೂಕಿನಲ್ಲಿ ಮಹದಾಯಿ ಹೋರಾಟ ದಶಕಗಳಿಂದ ನಡೆಯುತ್ತಲೇ ಇದೆ. ಅದರ ಭಾಗವಾಗಿ ಕಳೆದ 18 ದಿನಗಳ ಕಾಲ ಸರದಿ ಉಪವಾಸ ಸತ್ಯಾಗ್ರಹವನ್ನು ಮಾಡಿದ ರೈತರು ಇಂದಿನಿಂದ ಅಮರಣ ಉಪವಾಸ ಪ್ರತಿಭಟನೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಇಂದು ಮುಂಜಾನೆ ರೈತ ಗೀತೆ ಹಾಡುವ ಮೂಲಕ ಅಮರಣ ಉಪವಾಸ ಹೋರಾಟಕ್ಕೆ ಚಾಲನೆ ನೀಡಿದ ರೈತರು ಮಧ್ಯಾಹ್ನದವರೆಗೆ ಊಟ ಸೇವನೆ ಮಾಡಿಲ್ಲ. ಕುಳಿತ ಜಾಗ ಬಿಟ್ಟು ಎದ್ದಿಲ್ಲ.
ಇನ್ನು ಆಗಾಗ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆ ಮಾಡುತ್ತಲೇ ಇದ್ದಾರೆ. ಅದೃಷ್ಟವಶಾತ್ ಇದುವರೆಗೂ ಯಾವುದೇ ರೈತರಿಗೆ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಸಿ.ಸಿ.ಪಾಟೀಲ್ ಮಹದಾಯಿ ಹೋರಾಟ ಹಲವಾರು ವರ್ಷಗಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ನಮ್ಮೆಲ್ಲರ ಸಹಕಾರ ನಿಮಗೆ ಇದೆ. ಅಮರಣ ಉಪವಾಸ ಹೋರಾಟ ಸರಿಯಲ್ಲ ಎಂದು ರೈತರ ಮನವೊಲಿಕೆಗೆ ಪ್ರಯತ್ನ ಪಟ್ಟರು
ಸಿ.ಸಿ.ಪಾಟೀಲ್ ಜೊತೆಗೆ ಮಹದಾಯಿ ಹೋರಾಟ ವೇದಿಕೆಗೆ ಭೇಟಿ ನೀಡಿದ ಶಾಸಕ ಬಸವರಾಜ ಯತ್ನಾಳ್ ಸಹ ರೈತರ ಮನ ಪರಿವರ್ತನೆ ಮಾಡಲು ಪ್ರಯತ್ನಿಸಿದರು. ವಿಜಯಪುರ ಜಿಲ್ಲೆಯಲ್ಲಿನ ಆಲಮಟ್ಟಿ ಡ್ಯಾಂ ಕಟ್ಟುವ ಸಲುವಾಗಿ ನಡೆದ ಹೋರಾಟದ ಬಗ್ಗೆ ಮೆಲುಕು ಹಾಕುತ್ತಾ ರೈತರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು. ನಿಮ್ಮ ಜೊತೆಗೆ ನಾವೆಲ್ಲರೂ ಇದ್ದೇವೆ. ಜಗದೀಶ್ ಶೆಟ್ಟರ್ ,ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ನಾವು ಈ ಭಾಗದ ಎಲ್ಲಾ ರೈತರು ಈ ಸಾರಿ ನಡೆಯುವ ಅಧಿವೇಶನದಲ್ಲಿ ಎದ್ದು ನಿಂತು ಮಾತನಾಡುವ ಮೂಲಕ ನೀರು ತರುವ ಪ್ರಯತ್ನವನ್ನು ಮಾಡುತ್ತೇವೇ ಎಂದು ರೈತರಲ್ಲಿ ಆಶಾಭಾವನೆ ಮೂಡಿಸಿದರು
ಒಟ್ಟಿನಲ್ಲಿ ಹಲವಾರು ವರ್ಷಗಳ ಹೋರಾಟಕ್ಕೆ ಇನ್ನಾದರೂ ನ್ಯಾಯ ಸಿಗಬೇಕು , ರೈತರ ಮನ ತಣಿಸುವ ಗಂಗಾಮಾತೆ ಉಕ್ಕಿ ಬರಬೇಕು , ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬೇಕು ಎನ್ನುವುದೇ ಪಬ್ಲಿಕ್ ನೆಕ್ಸ್ಟ್ ಆಶಯ.
ಮಲ್ಲಿಕಾರ್ಜುನ , ಪಬ್ಲಿಕ್ ನೆಕ್ಸ್ಟ್, ನರಗುಂದ
Kshetra Samachara
19/10/2024 05:32 pm