ಧಾರವಾಡದ : ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ರಾಜ್ಯ ಮಟ್ಟದ ಸಮಾಲೋಚನಾ ಸಭೆ ಇಂದು ಧಾರವಾಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸಬೇಕು, ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡಬೇಕು, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮಾತನಾಡಿ ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗೆ ನೌಕರರೇ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.
ಸಂಘದಿಂದ ಈಗಾಗಲೇ ನವೆಂಬರ್ ತಿಂಗಳಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತಿ ನೌಕರರ ಹೋರಾಟದ ಬಗ್ಗೆ ಕರೆ ನೀಡಲಾಗಿದ್ದು. ತಮ್ಮ ನ್ಯಾಯಯುತ ಹಕ್ಕಗಳನ್ನು ಪಡೆಯುವ ಬಗ್ಗೆ ರಾಜ್ಯದ ಎಲ್ಲಾ ಹಂತದ ನೌಕರರು ಒಟ್ಟಾಗಿ ಹೋರಾಟವನ್ನು ಯಶಸ್ವಿಯಾಗಿ ನಡೆಸಿಕೊಡುವ ಬಗ್ಗೆ ಚರ್ಚಿಸಲಾಯಿತು.
ಇದೇ ವೇಳೆ ಜಿಲ್ಲೆಯ ನೌಕರರ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘಟನೆಯನ್ನು ರಚಿಸಲಾಯಿತು. ಧಾರವಾಡ ಜಿಲ್ಲಾಧ್ಯಕ್ಷರಾಗಿ ಕಿರಣ ಕಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದ ಮಡಿವಾಳರ, ಜಿಲ್ಲಾ ಉಪಾಧ್ಯಕ್ಷರಾಗಿ, ಬೂದಪ್ಪ ವಾಲಿಕರ್, ಕರವೀರಪ್ಪ ಬೆನ್ನಿ, ವಿನೋದ್ ಕರಗೂರು, ರವಿಬೆಂಗೇರಿ, ಚೇತನ್ ಮಟ್ಟೂರು, ನಾಗರಾಜ್ ನೆರೆಗಲ್ ಸಂಘಟನಾ ಕಾರ್ಯದರ್ಶಿಯಾಗಿ ವೀರಪ್ಪ ಮರಾಬಾದ್, ಜೊತೆ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ರೆಡ್ಡಿಯರ್, ಇವರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅನೇಕರು ಉಪಸ್ಥಿತರಿದ್ದರು.
Kshetra Samachara
20/10/2024 10:55 pm