ಧಾರವಾಡ: ಕಳೆದ ಕೆಲ ತಿಂಗಳಿನಿಂದ ಅತಿಯಾದ ಮಳೆಯಾಗಿ ರೈತರು ಬೆಳೆದ ಬೆಳೆ ಹಾಳಾಗಿವೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಸಂಘಟನೆಯ ನೇತೃತ್ವದಲ್ಲಿ ರೈತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲೆಯ ಅಂದಾಜು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಮಳೆಯಿಂದಾಗಿ ಹಾನಿಗೀಡಾಗಿದೆ. ಇದರಿಂದಾಗಿ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ರಾಜ್ಯ ಸರ್ಕಾರದಿಂದ ಇದುವರೆಗೂ ಕಟ್ಟಿದ ಬೆಳೆ ವಿಮೆ ಸಹ ಬಂದಿಲ್ಲ. ಕೃಷಿ ಇಲಾಖೆಯವರನ್ನು ಕೇಳಿದರೆ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಸೋಯಾಬಿನ್ ಬೆಳೆಯನ್ನು ರೈತರು ಈಗಾಗಲೇ ಕಟಾವು ಮಾಡಿ ರಾಶಿ ಮಾಡಿದ್ದಾರೆ. ರಾಶಿ ಮಾಡಿದ ಕಾಳುಗಳು ಮಳೆಗೆ ಸಿಲುಕುತ್ತಿವೆ. ರಾಜ್ಯ ಸರ್ಕಾರ ಮಾತ್ರ ಬೆಂಬಲ ಬೆಲೆಯಡಿ ಸೋಯಾಬಿನ್ ಖರೀದಿಸುವ ಖರೀದಿ ಕೇಂದ್ರ ತೆರೆಯದೇ ಕಾಲಹರಣ ಮಾಡುತ್ತಿದೆ. ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಪಶು ಸಂಗೋಪನಾ ಇಲಾಖೆಯ ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಸಕಾಲಕ್ಕೆ ವೈದ್ಯರು ಸಿಗದೇ ಇರುವುದರಿಂದ ರೈತರು ಖಾಸಗಿ ವೈದ್ಯರಿಗೆ ಕೇಳಿದಷ್ಟು ಹಣ ಕೊಟ್ಟು ಪಶುಗಳಿಗೆ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಇದೆ. ತುರ್ತು ಸೇವೆ ನಂಬರ್ 1962 ಕೂಡ ಸರಿಯಾಗಿ ಕೆಲಸವನ್ನೇ ಮಾಡುತ್ತಿಲ್ಲ. ಸರ್ಕಾರ ಈ ಎಲ್ಲ ಸಮಸ್ಯೆಗಳತ್ತ ಕೂಡಲೇ ಗಮನಹರಿಸಬೇಕು ಎಂದು ರೈತರು ಒತ್ತಾಯಿಸಿದರು.
Kshetra Samachara
21/10/2024 05:07 pm