ಸಾಗರ : ಮಕ್ಕಳ ಮನೋವಿಕಾಸಕ್ಕೆ ಶಿಕ್ಷಣದ ಜೊತೆಗೆ ಕಲಾ ಪ್ರಕಾರಗಳ ಸಾಂಗತ್ಯ ಅಗತ್ಯ ಎಂದು ಡೊಳ್ಳು ಕಲಾವಿದ ಬಾಗಿಲು ರಾಮಪ್ಪ ಕುಗ್ವೆ ತಿಳಿಸಿದರು.
ಇಲ್ಲಿನ ಎಸ್.ಎನ್.ನಗರದ ಭೂಮಿ ರಂಗಮನೆಯಲ್ಲಿ ಸ್ಪಂದನ ರಂಗ ತಂಡವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ಮಕ್ಕಳ ರಂಗ ತರಬೇತಿ ಶಿಬಿರ ಕಲರವ-2024ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲಾಕಾಲೇಜುಗಳ ತರಗತಿಗಳಲ್ಲಿ ಕಲಿಸುವ ಪಾಠಗಳಿಂದ ಮಕ್ಕಳ, ಯುವಜನರ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎನ್ನಲಾಗದು. ಇಂತಹ ಕಲಿಕೆಗಳನ್ನು ಮೀರಿದ ಸಂಗತಿಗಳನ್ನು ನಾಟಕ, ಸಂಗೀತ, ಜಾನಪದ ಕಲೆಗಳು ನೀಡುತ್ತದೆ. ಈ ಕಾರಣ ಪೋಷಕರು ಮಕ್ಕಳಿಗೆ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಬೇಕು ಎಂದರು.
ನಗರಸಭಾ ಸದಸ್ಯೆ ಸವಿತಾ ವಾಸು ಮಾತನಾಡಿ, ಮಕ್ಕಳಿಗೆ ಕಲಿಕೆ, ರಂಗ ತರಬೇತಿ ಜೊತೆಗೆ ಪರಿಸರ ಜಾಗೃತಿ ಮೂಡಿಸಬೇಕಾಗಿದೆ. ಪರಿಸರ ನಾಶವಾಗುತ್ತಿರುವ ಈ ದಿನಮಾನಗಳಲ್ಲಿ ಮಕ್ಕಳ ಮೂಲಕವಾದರೂ ಪರಿಸರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಸ್ಪಂದನ ರಂಗ ತಂಡದ ಅಧ್ಯಕ್ಷೆ ಎಂ.ವಿ.ಪ್ರತಿಭಾ, ಪವನ್ ಮಹಾಲಕ್ಷಿ, ನಂದಿನಿ, ನಿಖಿಲ್ ಇನ್ನಿತರರು ಹಾಜರಿದ್ದರು.
Kshetra Samachara
19/10/2024 06:42 pm