ಕುಂದಗೋಳ : ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ಹಾಕಿಕೊಂಡಿದ್ದ 3 ಮಂದಿ ಕುರಿಗಾಹಿಗಳನ್ನು ಮತ್ತು 150 ಕುರಿಗಳನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿ ಆಗಿದ್ದಾರೆ.
ಇಂದು ಮಧ್ಯಾಹ್ನದ ಧಾರಾಕಾರ ಮಳೆಗೆ ದೇವನೂರು ಬಳಿಯ ಬೆಣ್ಣೆಹಳ್ಳದ ಪ್ರವಾಹ ಹೆಚ್ಚಿದ ಪರಿಣಾಮ ಕುರಿಗಳನ್ನು ಮೇಯಿಸಲು ಹೋದ ಮೂವರು ಕುರಿಗಾಹಿಗಳು ಮತ್ತು 150 ಕುರಿಗಳು ನೀರಿನ ಪ್ರವಾಹಕ್ಕೆ ಸಿಲುಕಿಕೊಂಡಿದ್ದರು.
ಈ ವೇಳೆ ಸ್ಥಳೀಯರಾದ ಯಲ್ಲಪ್ಪ ಬೆನಕನಹಳ್ಳಿ ಎಂಬುವವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು, ಕಾರ್ಯ ಪ್ರವೃತ್ತರಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆ ಹಣುಮಂತ ಬೆನಕನಹಳ್ಳಿ, ಮಂಜಪ್ಪ ಬೆನಕನಹಳ್ಳಿ ಮತ್ತು ಇನ್ನೋರ್ವ ವ್ಯಕ್ತಿಯನ್ನು ಪ್ರವಾಹದ ಅಪಾಯದಿಂದ ಪಾರು ಮಾಡಿದ್ದಾರೆ.
ಪ್ರವಾಹ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ಆರ್.ಎಮ್. ಬೇಪಾರಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಲ್ಲಾ ಬಕ್ಷ್, ಶಂಕರ್, ರಾಜು, ವಿಜಯ, ಸತೀಶ, ಮಂಜುನಾಥ, ಹೊನ್ನಪ್ಪ ಭಾಗವಹಿಸಿದ್ದರು. ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
17/10/2024 08:37 pm