ಧಾರವಾಡ: ಹಬ್ಬ ಹುಣ್ಣಿಮೆಗೆ ಇಂದಿಗೂ ಮಹತ್ವ ಇರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಗ್ರಾಮೀಣ ಪ್ರದೇಶದ ಜನ ಅದರಲ್ಲೂ ರೈತಾಪಿ ವರ್ಗ ಈ ಹಬ್ಬ, ಹರಿದಿನಗಳನ್ನು ಅಚ್ಚುಕಟ್ಟಾಗಿ ಸಂಪ್ರದಾಯ ಬದ್ಧವಾಗಿ ಆಚರಿಸುತ್ತ ಬಂದಿದ್ದಾರೆ.
ಮುಂಗಾರು ಬೆಳೆ ತೆಗೆದು ಹಿಂಗಾರು ಬೀಜ ಬಿತ್ತನೆ ಮಾಡಿ, ಬೆಳೆ ಮೊಳಕೆಯೊಡೆಯುವ ಹೊಸ್ತಿಲಲ್ಲಿ ಬರುವ ಹುಣ್ಣಿಮೆಯೇ ಈ ಸೀಗೆ ಹುಣ್ಣಿಮೆ. ಈ ಹುಣ್ಣಿಮೆಗೆ ವಿಶಿಷ್ಟವಾದ ಮಹತ್ವವಿದೆ. ತಾಯಿ ಗರ್ಭದಲ್ಲಿ ಮಗುವಿನ ಆಕಾರ ಮೂಡಿದಾಗ ಹೇಗೆ ಸೀಮಂತ ಎಂಬ ಉಡಿ ತುಂಬುವ ಕಾರ್ಯವನ್ನು ಮಾಡುತ್ತಾರೋ ಅದೇ ರೀತಿ ಹಿಂಗಾರು ಬಿತ್ತನೆಯಾಗಿ ಬೀಜ ಮೊಳಕೆಯೊಡೆದ ಹೊಸ್ತಿಲಲ್ಲಿ ಭೂತಾಯಿಗೆ ಉಡಿ ತುಂಬಿ ಹೊಲದ ತುಂಬೆಲ್ಲ ಹಸಿರು ಚೆಲ್ಲಲಿ ಎಂದು ಪೂಜೆ ಸಲ್ಲಿಸುತ್ತಾರೆ.
ಭೂಮಿತಾಯಿಗೆ ಉಡಿ ತುಂಬಿ ಇಡೀ ಹೊಲದ ತುಂಬೆಲ್ಲ ಮಾಡಿದ ಅಡುಗೆಯನ್ನು ಹುಲ್ಲುಲ್ಲಿಗ್ಯೋ ಸುರಾಬ್ಲಿಗೋ ಎಂದು ಚೆರಗ ಚೆಲ್ಲಿ ಭೂತಾಯಿಗೆ ಪ್ರಸಾದ ಅರ್ಪಿಸುವುದೇ ಈ ಸೀಗೆ ಹುಣ್ಣಿಮೆಯ ಅರ್ಥ. ಆದರೆ, ಕಳೆದ ಎಂಟತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆಯೇ ಆಗಿಲ್ಲ. ಗುರುವಾರ ಕೂಡ ಧಾರವಾಡ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಸೀಗೆ ಹುಣ್ಣಿಮೆಯ ಸಂಭ್ರಮವೇ ಮಾಸಿ ಹೋಗಿತ್ತು. ಆದರೆ, ಸಂಪ್ರದಾಯ ಬಿಡಬಾರದೆಂದು ರೈತಾಪಿ ವರ್ಗ ಭೂತಾಯಿಗೆ ಪೂಜೆ ಸಲ್ಲಿಸಿ ಉಡಿ ತುಂಬಿದ್ದಾರೆ.
ಇನ್ನು ಈ ಸೀಗೆ ಹುಣ್ಣಿಮೆಯನ್ನು ಧಾರವಾಡ ತಾಲೂಕಿನ ಮನಸೂರಿನಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಈ ಹುಣ್ಣಿಮೆಯಂದು ಗ್ರಾಮದ ಯುವಕರೆಲ್ಲ ಸೇರಿ ಹೆಜ್ಜೆ ಮೇಳ ಹಾಗೂ ಕೋಲಾಟದಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಸಂಭ್ರಮಿಸಲಾಗುತ್ತದೆ. ಗುರುವಾರ ಕೂಡ ಕೋಲಾಟದ ದೃಶ್ಯಗಳು ಮನಸೂರು ಗ್ರಾಮದಲ್ಲಿ ಗಮನಸೆಳೆದವು.
Kshetra Samachara
17/10/2024 07:12 pm