ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಶೇಷ ಬಸ್ ಕಾರ್ಯಾಚರಣೆ - ಯಲ್ಲಮ್ಮನ ಗುಡ್ಡಕ್ಕೆ 10 ಸಾವಿರಕ್ಕೂ ಹೆಚ್ಚು ಜನರ ಪ್ರಯಾಣ

ಹುಬ್ಬಳ್ಳಿ : ಶೀಗಿ ಹುಣ್ಣಿಮೆಯ ಪ್ರಯುಕ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಯಲ್ಲಮ್ಮನ ಗುಡ್ಡಕ್ಕೆ ವ್ಯವಸ್ಥೆ ಮಾಡಿದ್ದ ವಿಶೇಷ ಬಸ್‌ಗಳಲ್ಲಿ ಅಕ್ಟೋಬರ್ 17ರಂದು ಗುರುವಾರ ಅಂದಾಜು 10 ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ‌ ಮಾಡಿದ್ದಾರೆ. ಅಕ್ಟೋಬರ್ 18ರಂದು ಶುಕ್ರವಾರವೂ ಸಹ ವಿಶೇಷ ಬಸ್‌ಗಳ ವ್ಯವಸ್ಥೆ ಇರುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಪ್ರತಿ ವರ್ಷ ಶೀಗಿ ಹುಣ್ಣಿಮೆಗೆ ಹುಬ್ಬಳ್ಳಿ, ನವಲಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕಾಗಿ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗಿಬರುತ್ತಾರೆ. ಅದರಂತೆ, ಈ ಬಾರಿ ಶೀಗಿ ಹುಣ್ಣಿಮೆ ದಿನ ಅಕ್ಟೋಬರ್ 17ರಂದು ಗುರುವಾರ ಹಾಗೂ ದೇವಿಯ ವಾರದ ನಿಮಿತ್ಯ 18ರಂದು ಶುಕ್ರವಾರ ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ನವಲಗುಂದ ಬಸ್ ನಿಲ್ದಾಣದಿಂದ ನೇರವಾಗಿ ಸೌದತ್ತಿ ಯಲ್ಲಮ್ಮನಗುಡ್ಡಕ್ಕೆ ಹೆಚ್ಚುವರಿ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 17ರಂದು ಗುರುವಾರ ಬೆಳಿಗ್ಗೆಯಿಂದಲೇ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ವಸತಿ ಬಸ್‌ಗಳಲ್ಲಿ ಭಕ್ತಾದಿಗಳು ಬಸ್ ನಿಲ್ದಾಣಗಳಿಗೆ ಬರಲಾರಂಭಿಸಿದರು. ಸಂಜೆಯವರೆಗೆ ಮೂರು ಬಸ್ ನಿಲ್ದಾಣಗಳಿಂದ ಒಟ್ಟು 87 ವಿಶೇಷ ಬಸ್‌ಗಳನ್ನು ಬಿಡಲಾಯಿತು. ಹೋಗುವ ಹಾಗೂ ಬರುವ ಎರಡೂ ಸರತಿಗಳಲ್ಲಿ ಭಕ್ತಾದಿಗಳು ಸೇರಿದಂತೆ ಅಂದಾಜು 10,500 ಜನರು ಪ್ರಯಾಣ ಮಾಡಿದ್ದಾರೆ. ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ಇದ್ದರು.

ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪಿ.ವೈ.ಗಡಾದ, ಡಿಪೋ ಮ್ಯಾನೇಜರ್‌ಗಳಾದ ರೋಹಿಣಿ, ನಾಗರಾಜ, ಮುನ್ನಾಸಾಬ್, ನಿಲ್ದಾಣಾಧಿಕಾರಿಗಳಾದ ಸುಭಾಸ, ವಿ.ಎಸ್.ಹಂಚಾಟೆ, ಇತರೆ ಅಧಿಕಾರಿಗಳಾದ ಸದಾನಂದ ಒಡೆಯರ, ಸುನಿಲ ವಾಡೇಕರ, ಐ.ಜಿ.ಮಾಗಾಮಿ, ಐ.ಐ.ಕಡ್ಲಿಮಟ್ಟಿ ಮತ್ತಿತರರು ವಿಶೇಷ ಬಸ್ ಗಳ ಮೇಲ್ವಿಚಾರಣೆ ಮಾಡಿದರು.

ದೇವಿಯ ವಾರದ ನಿಮಿತ್ಯ ಶುಕ್ರವಾರ ಅಕ್ಟೋಬರ್ 18 ರಂದು ಸಹ ವಿಶೇಷ ಬಸ್‌ಗಳ ವ್ಯವಸ್ಥೆ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/10/2024 06:47 pm

Cinque Terre

34.28 K

Cinque Terre

1

ಸಂಬಂಧಿತ ಸುದ್ದಿ