ಮೊಳಕಾಲ್ಮುರು: ಬೀದಿ ನಾಯಿಗಳ ದಾಳಿಯಿಂದ ಓರ್ವ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆಯು ರಾಂಪುರ ಗ್ರಾಪಂ ವ್ಯಾಪ್ತಿಯ ಕೆರೆಕೊಂಡಾಪುರ ಗ್ರಾಮದಲ್ಲಿ ನಡೆದಿದೆ.
ರಾಂಪುರ ಗ್ರಾಮದ ಮಿಥುನ್ (11) ಎನ್ನುವ ವಿದ್ಯಾರ್ಥಿ ಅರುಣೋದಯ ಶಾಲೆಗೆ ಬುಧವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಟ್ಯೂಷನ್ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಶಾಲೆಯ ಕಾಂಪೌಂಡ್ ನಲ್ಲಿದ್ದ ನರಭಕ್ಷಕ ಬೀದಿ ನಾಯಿಗಳ ಗುಂಪು ಏಕಾಏಕಿ ಬಂದು ಬಾಲಕನ ಮೇಲೆ ದಾಳಿ ನಡೆಸಿವೆ.
ಬಾಲಕನ ಎದೆ,ಕೈಕಾಲು ಮುಖದ ಮತ್ತು ತಲೆ ಭಾಗಗಳಿಗೆ ನಾಯಿಗಳು ಗಂಭೀರವಾಗಿ ಕಚ್ಚಿ ಗಾಯಗೊಳಿಸಿವೆ. ಬಾಲಕ ಕಿರುಚಾಡುವುದನ್ನು ಕೇಳಿ ಓಡಿ ಹೋಗಿ ಆಟೋ ಚಾಲಕ ರಾಜಪ್ಪ ಬಾಲಕನನ್ನು ರಕ್ಷಿಸಿ ತನ್ನ ಆಟೋದಲ್ಲಿ ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಬೀದಿ ನಾಯಿಗಳ ಹಾವಳಿಗೆ ಮುಗ್ಧ ಬಾಲಕ ಬಲಿಯಾಗಿರುವುದು ತುಂಬಾ ನೋವಿನ ಸಂಗತಿಯಾಗಿದ್ದು ಈಗಲಾದರೂ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.
PublicNext
16/10/2024 03:39 pm