ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ನಡೆದ ಭೀಕರ ಗುಡ್ಡ ಕುಸಿತದಲ್ಲಿ 11 ಮಂದಿ ನಾಪತ್ತೆಯಾಗಿದ್ದು ಈವರೆಗೆ 9 ಜನರ ಮೃತದೇಹಗಳು ಪತ್ತೆಯಾಗಿದ್ದವು. ಇನ್ನಿಬ್ಬರಾದ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಅವರ ಶವಗಳನ್ನು ಹೊರತೆಗೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು,ಇಲ್ಲದಿದ್ದರೆ ಶಿರೂರು ಹೆದ್ದಾರಿಯಲ್ಲಿ ಧರಣಿ ಮಾಡುವುದಾಗಿ ತಾಲೂಕಾ ಯುವನಾಮಧಾರಿ ಸಂಘ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಅವರು ಮಂಗಳವಾರ ಮುಖ್ಯಮಂತ್ರಿಗಳಿಗೆ ತಾಲೂಕಾ ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಯುವನಾಮಧಾರಿ ಸಂಘದ ಗೌರವಾಧ್ಯಕ್ಷ ಗಜಾನನ ನಾಯ್ಕ ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದವರ ಮೃತದೇಹ ಶೋಧ ಕಾರ್ಯಾಚರಣೆ ಜಿಲ್ಲಾಡಳಿತ ಸ್ಥಗಿತ ಮಾಡಿರುವುದು ಖಂಡನೀಯ.ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಜಗನ್ನಾಥ ನಾಯ್ಕನ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಅಪ್ಪನ ಅಂತ್ಯ ಸಂಸ್ಕಾರ ಮಾಡಲಾಗದೆ ಆ ಹೆಣ್ಣುಮಕ್ಕಳು ಅಸಹಾಯಕರಾಗಿದ್ದಾರೆ.
ಗುಡ್ಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರವು ಸೂಕ್ತ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನದಿಯಾಳದಿಂದ ಮೃತದೇಹವನ್ನು ಹೊರತೆಗೆಯುವುದು ಅತ್ಯಂತ ಮುಖ್ಯವಾಗಿದೆ. ಈವರೆಗೆ ಮೃತದೇಹ ದೊರೆಯದ ಕಾರಣ ಸರ್ಕಾರವು ಪರಿಹಾರ ನೀಡಲು ಸಾಧ್ಯವಾಗಿಲ್ಲ ಆದರೆ ಕಾರ್ಯಾಚರಣೆ ಸ್ಥಗಿತಮಾಡಿರುವುದು ಸರಿಯಲ್ಲ ಎಂದರು.
ನಂತರ ಮಾತನಾಡಿದ ಯುವನಾಮಧಾರಿ ತಾಲೂಕಾಧ್ಯಕ್ಷ ಪ್ರಶಾಂತ ನಾಯ್ಕ,ಮಂಜಗುಣಿ ಶಿರೂರು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ ಕೇರಳದ ಅರ್ಜುನನ ಶವವನ್ನು ಹೊರತೆಗೆಯಲು ಸರ್ಕಾರವು ತೋರಿದ ಮುತುವರ್ಜಿ ನಮ್ಮ ರಾಜ್ಯದ ಜನರ ಶವಗಳನ್ನು ಹೊರತೆಗೆಯಲು ತೋರಿಸುತ್ತಿಲ್ಲ ಎಂಬುದು ಬೇಸರದ ಸಂಗತಿ. ಈಗಾಗಲೇ ಮೂರು ತಿಂಗಳು ಕಳೆದಿದ್ದು, ಈ ಕಾರ್ಯಾಚರಣೆಯಲ್ಲಿ ವಿಳಂಬವಾದಷ್ಟು ಮಣ್ಣಿನ ಅಡಿಯಲ್ಲಿ ಬಿದ್ದಿರುವ ಶವಗಳ ಅವಶೇಷಗಳನ್ನು ಹೊರತೆಗೆಯುವುದು ಕಷ್ಟವಾಗುತ್ತದೆ.
ಅದಕ್ಕಾಗಿ ನಾವು ತಾಲೂಕಾ ಯುವ ನಾಮಧಾರಿ ಸಂಘದ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಈ ಮೂಲಕ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಅವರ ಶವಗಳನ್ನು ಹೊರತೆಗೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರವು ಈ ಕಾರ್ಯಾಚರಣೆಯನ್ನು ಪುನರಾರಂಭಿಸಿ. ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಯುವನಾಮಧಾರಿ ಸಂಘದ ಸದಸ್ಯರಾದ ರಾಘವೇಂದ್ರ ನಾಯ್ಕ,ಅನೀಲ್ ನಾಯ್ಕ,ಮಂಜಗುಣಿ, ವಿಜಯ್ ಎಂ ನಾಯ್ಕ,ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಸುನೀಲ್ ನಾಯ್ಕ,ಪೃಥ್ವಿರಾಜ್ ನಾಯ್ಕ,ಗಣೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Kshetra Samachara
15/10/2024 09:22 pm