ದೊಡ್ಡಬಳ್ಳಾಪುರ: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದ ಮೇಲೆ ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುವ ಬಿಜೆಪಿಯವರಿಗೆ ನಾಚಿಕೆ ಆಗಲ್ವಾ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್, ಬಿಜೆಪಿ ವಿರುದ್ಧ ದಾಳಿ ನಡೆಸಿದ್ದರು. ಡಿ.ಕೆ.ಸುರೇಶ್ ಮಾತಿಗೆ ತಿರುಗೇಟು ನೀಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ "ಮುನಿರತ್ನ ಕಾಂಗ್ರೆಸ್ ನಲ್ಲಿದ್ದರೆ ಒಳ್ಳೆಯವನು, ಬಿಜೆಪಿಗೆ ಬಂದ್ರೆ ಕೆಟ್ಟವನಾ?" ಎಂದು ಪ್ರಶ್ನೆ ಮಾಡುವ ಮೂಲಕ ಡಿ.ಕೆ.ಸುರೇಶ್ ಗೆ ಪ್ರತ್ಯುತ್ತರ ನೀಡಿದ್ದಾರೆ.
ದೊಡ್ಡಬಳ್ಳಾಪುರದ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಅನಂತರ ಮಾಧ್ಯಮದೊಂದಿಗೆ ಮಾತನಾಡಿ, ಡಿ.ಕೆ. ಬ್ರದರ್ಸ್ ಬಗ್ಗೆ ಕೋತ್ವಾಲ್ ರಾಮಚಂದ್ರನ ಶಿಷ್ಯರು ಎಂದು ಮಾಧ್ಯಮದಲ್ಲಿ ಪ್ರಚಾರ ಆಗಿತ್ತು. ಮುನಿರತ್ನ ನಮ್ನ ಪಕ್ಷಕ್ಕೆ ಬಂದು ಕೇವಲ 5 ವರ್ಷ ಆಗಿದೆ. ಆದರೆ, ಮುನಿರತ್ನ 30 ವರ್ಷ ಕಾಂಗ್ರೆಸ್ ನಲ್ಲಿಯೇ ಇದ್ದರು. ಆವಾಗ ಒಳ್ಳೆಯವನಾಗಿದ್ದ, ಈಗ ಕೆಟ್ಟವನಾಗಿದ್ದಾನಾ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಯಚೂರಿನಲ್ಲಿ ಪಿಎಸ್ ಐ ಆತ್ಮಹತ್ಯೆ ಮಾಡಿಕೊಂಡರು, ಅವರ ಹೆಂಡತಿ ದೂರು ನೀಡಿದರು. ಬೀದಿಯಲ್ಲಿ ಪ್ರತಿಭಟನೆ ಮಾಡಿ ಬಂಧಿಸಿ ಎಂದು ಕೂಗಿದರು. ಆದರೂ ನೀವು ಯಾಕೆ ಬಂಧಿಸಲಿಲ್ಲ. ನೀವು ನಿಮ್ಮ ಪಾರ್ಟಿಯ ಎಂಎಲ್ ಎಗೆ ಒಂದು, ಬಿಜೆಪಿ ಎಂಎಲ್ ಎ ಗೆ ಒಂದು ರೀತಿ ತಾರತಮ್ಯ ಧೋರಣೆ ಮಾಡುತ್ತಿದ್ದೀರಾ! ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ.
ನಾವು ಯಾರೂ ಕೂಡ ಬೆಂಬಲಿಸಲ್ಲ ಎಂದರು.
ಕಾನೂನಿನ ಪ್ರಕಾರ ನೋಟಿಸ್ ಕೊಡಬೇಕಿತ್ತು. ಓಡಿ ಹೋಗಿದ್ದರೆ ಬಂಧಿಸಬೇಕಿತ್ತು. ತಪ್ಪು ಯಾರೇ ಮಾಡಿದ್ದರೂ ಖಂಡಿತಾ ಶಿಕ್ಷೆ ಆಗಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಪೊಲೀಸ್ ಸ್ಟೇಷನ್ ಗಳನ್ನು ನೀವು ಕಾಂಗ್ರೆಸ್ ಸ್ಟೇಷನ್ ಆಗಿ ಮಾಡಿಕೊಂಡಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
PublicNext
19/09/2024 09:25 pm