ಮಂಗಳೂರು: ಮಂಗಳೂರು ಮನಪಾ ನೂತನ ಮೇಯರ್- ಉಪ ಮೇಯರ್ ಆಯ್ಕೆ ಬಳಿಕ ಅಭಿನಂದನೆ ಸಭೆ ನಡೆಯುತ್ತಿದ್ದಾಗಲೇ ಬಿಜೆಪಿ-ಕಾಂಗ್ರೆಸ್ ಮನಪಾ ಸದಸ್ಯರ ನಡುವೆ ವಾಕ್ಸಮರದ ಪ್ರಹಸನ ನಡೆಯಿತು.
ಸಂಸದ, ಶಾಸಕರುಗಳು ನೂತನ ಮೇಯರ್ - ಉಪ ಮೇಯರ್ಗೆ ಅಭಿನಂದನೆ ಸಲ್ಲಿಸಿದ ಬಳಿಕ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಭಿನಂದನೆ ಭಾಷಣ ಮಾಡಿದರು. ಈ ವೇಳೆ ಅವರು ಭಾಷಣ ಮಾಡುತ್ತಿದ್ದಾಗಲೇ ವಿಪಕ್ಷ ಸದಸ್ಯರು ನೂತನ ಮೇಯರ್ - ಉಪ ಮೇಯರ್ಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಲು ತೆರಳಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಸುಧೀರ್ ಶೆಟ್ಟಿ ಕಣ್ಣೂರು, 'ಅರ್ಧದಲ್ಲೇ ಯಾಕೆ ಅಭಿನಂದನೆ ಸಲ್ಲಿಸುತ್ತಿದ್ದೀರಿ. ಎಸ್ಸಿ ಸಮುದಾಯದ ಸದಸ್ಯರೋರ್ವರು ಮೇಯರ್ ಆಗಿರುವಾಗ ನೀವು ಹೀಗೆ ಮಾಡುವುದು ಸರಿಯಲ್ಲ' ಎಂದು ಆಕ್ಷೇಪ ಎತ್ತಿದ್ದಾರೆ.
ಆಗ ವಿಪಕ್ಷ ಸದಸ್ಯರು ಮಾತನಾಡಿ, ತಾವು ರಾಜ್ಯ ಸರಕಾರವನ್ನು ದೂಷಿಸುವುದು ಸರಿಯಲ್ಲ. ವಿನಾ ಕಾರಣ ಮೇಯರ್ ಅಭಿನಂದನೆ ಸಭೆಯಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಈಗಾಗಲೇ ಮಾತನಾಡಿರುವ ಎಂಪಿ, ಎಂಎಲ್ಎಗಳು ರಾಜಕೀಯ ಮಾತನಾಡಿಲ್ಲ. ತಾವೇಕೆ ಹೀಗೆ ಮಾಡುತ್ತಿದ್ದೀರಿ ಎಂದು ಹೇಳಿದರು.
ಅಲ್ಲದೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಈ ಹಿಂದೆ ಮೇಯರ್ ಅಭ್ಯರ್ಥಿ ಮೀಸಲಾತಿ ನಾಲ್ಕು ಜನರಲ್ ಮೆರಿಟ್ಗೆ ಮಾತ್ರವಿತ್ತು. ಆದರೆ, ಎಸ್ಸಿ ಮೀಸಲಾತಿ ಬರಬೇಕಾದರೆ ನಮ್ಮ ನಿಯೋಗ ಯುಡಿ ಮಿನಿಸ್ಟರ್ರಲ್ಲಿಗೆ ಹೋಗಿ ಅವರ ಮನವೊಲಿಕೆ ಮಾಡಿ ತಂದದ್ದು. ಆದ್ದರಿಂದ ಎಸ್ಸಿ ಮೀಸಲಾತಿ ಬಂದು, ಎಸ್ಸಿ ಸಮುದಾಯದ ಸದಸ್ಯರೊಬ್ಬರು ಇದೀಗ ಮೇಯರ್ ಆಗಿದ್ದಾರೆ. ಆದ್ದರಿಂದ ಎಸ್ಸಿ ಮೀಸಲಾತಿ ಬರಬೇಕಾದರೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಹೇಳಿದರು. ಬಳಿಕ ಈ ವಾಕ್ಸಮರ ತಣ್ಣಗಾಗಿ, ಅಭಿನಂದನೆ ಸಭೆ ಮತ್ತೆ ಮುಂದುವರಿಯಿತು.
PublicNext
19/09/2024 04:15 pm