ಮುಲ್ಕಿ: ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ವತಿಯಿಂದ ಬಳ್ಕುಂಜೆ ಗ್ರಾಮದ ಕೊಲ್ಲೂರು ಪದವುನಲ್ಲಿ ಭೂಮಿಯ ಹಕ್ಕುಪತ್ರಕ್ಕಾಗಿ ಮುಲ್ಕಿ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು.
ಸುಮಾರು 15 ವರ್ಷಗಳಿಂದ ತಮಗೆ ಕೃಷಿ ಭೂಮಿ ಒದಗಿಸುವಂತೆ ಸುಮಾರು 30 ಕೊರಗ ಕುಟುಂಬಗಳು ಹೋರಾಟ ನಡೆಸುತ್ತಾ ಬಂದಿದ್ದು, ವರ್ಷದ ಹಿಂದೆ ಸರ್ಕಾರ ಎಚ್ಚೆತ್ತು ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಲೂರುಪದವು ನಲ್ಲಿ ಪ್ರತಿಯೊಬ್ಬರಿಗೂ ತಲಾ 14 ಸೆಂಟ್ಸ್ ಜಾಗ ನೀಡಲು ಸರ್ವೆ ನಂಬ್ರ 92ರಲ್ಲಿ 7.04 ಎಕರೆ ಜಾಗವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿತ್ತು.
ಆದರೆ, ಹಸ್ತಾಂತರ ಪ್ರಕ್ರಿಯೆ ಪೂರ್ಣವಾಗಿಲ್ಲ ಎಂಬುದು ಕೊರಗ ಸಮುದಾಯದ ಆಕ್ಷೇಪಣೆಯಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಕೊರಗ ಕುಟುಂಬಗಳು ಕೊಲ್ಲೂರುಪದವಿನ ಜಾಗ ಯಾವುದೇ ಕಾರಣಕ್ಕೂ ವಾಸಯೋಗ್ಯವಾಗಿಲ್ಲ. ಇಳಿಜಾರು ಪ್ರದೇಶವಾದ್ದರಿಂದ ತಮಗೆ ಬೇರೆ ಜಾಗ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈಗಾಗಲೇ ಕೊರಗ ಸಮುದಾಯದ ಮುಖಂಡರು ಎಳತ್ತೂರು ಬಳಿ ಸರ್ವೆ ನಂಬ್ರ 87ರಲ್ಲಿ 7.40 ಎಕರೆ ಜಾಗ ಗುರುತಿಸಿದ್ದು, ತಮಗೆ ಆ ಜಾಗವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಬುಧವಾರ ಐಟಿಡಿಪಿ ಅಧಿಕಾರಿ ಬಸವರಾಜ್ ಮತ್ತು ಇಲಾಖಾಧಿಕಾರಿಗಳೊಂದಿಗೆ ಆಗಮಿಸಿ ಕೊರಗ ಸಮುದಾಯದ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಕೊಲ್ಲೂರುಪದವಿಗೆ ಜೊತೆ ತೆರಳಿ ನಿರ್ದೇಶಿತ ಜಾಗ ಪರಿಶೀಲನೆ ನಡೆಸಿದ್ದಾರೆ. ಆದರೆ, ಕೊರಗ ಸಮುದಾಯ ಈ ಜಾಗ ಪಡೆಯಲು ನಿರಾಕರಿಸಿದ್ದಾರೆ.
ಸಮುದಾಯದ ರಾಜ್ಯ ಸಂಯೋಜಕ ಕೆ.ಪುತ್ರನ್ ಎಂಬವರು ಮಾತನಾಡಿ, ಸೂಕ್ತ ಜಾಗ ನೀಡುವ ತನಕ ಹೋರಾಟ ಮುಂದುವರಿಯಲಿದೆ. ನಾವು ತಿಳಿಸಿದ ವಾಸಯೋಗ್ಯ ಜಾಗವೇ ನಮಗೆ ಬೇಕು ಎಂದಿದ್ದಾರೆ.
Kshetra Samachara
19/09/2024 07:36 am