ಕಾಪು : ಉಡುಪಿ ಜಿಲ್ಲೆಯ ಕಾಪುವಿನ ಶಾಲೆಯೊಂದರಲ್ಲಿ ಪಠ್ಯವನ್ನು ಕೈಬಿಟ್ಟ ವಿಚಾರಕ್ಕೆ ಸಣ್ಣ ಜಟಾಪಟಿ ನಡೆದಿದೆ. ಕಾಪು ತಾಲೂಕಿನ ದಂಡ ತೀರ್ಥ ಅನುದಾನಿತ ಶಾಲೆಗೆ ಇಂದು ಬೆಳಿಗ್ಗೆ ಆಗಮಿಸಿದ ಕೆಲವು ಪೋಷಕರು ಸಿಲೆಬಸ್ ಪಾಠದ ವಿಚಾರವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.
ಏಳನೇ ತರಗತಿಯ ಸಮಾಜಶಾಸ್ತ್ರ ಸಿಲೆಬಸ್ ನಲ್ಲಿ ಎರಡು ಪಠ್ಯಗಳನ್ನು ಕೈ ಬಿಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರು ಸಂಸ್ಥಾನ, ಕೊಡಗು ,ತುಳುನಾಡು ಸಾವಿರ ಕಂಬದ ಬಸದಿ ಮತ್ತು ದಾಸ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಪಠ್ಯಗಳನ್ನು ಪಾಠ ಮಾಡದೆ ಕೈ ಬಿಡಲಾಗಿದೆ ಎಂಬುದು ಪೋಷಕರ ಆಕ್ಷೇಪ.
ಈ ಶಾಲೆಯಲ್ಲಿ ಎರಡು ಪಠ್ಯಗಳನ್ನು ಕೈಬಿಟ್ಟ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನೆ ಮಾಡಿದ್ದರು.ಇದೇ ವಿಚಾರ ಮನೆಯಲ್ಲಿ ಪ್ರಸ್ತಾಪವಾಗಿತ್ತು.ಕೆಲವು ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪಾಠಗಳನ್ನು ಸ್ಕಿಪ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪೋಷಕರು ಶಾಲಾಡಳಿತ ಮಂಡಳಿಯ ಜೊತೆ ಸಭೆ ನಡೆಸುತ್ತಿದ್ದಂತೆ, ಹಿಂದೂ ಸಂಘಟನೆ ಕಾರ್ಯಕರ್ತರು ಶಾಲಾ ವಠಾರದಲ್ಲಿ ಜಮಾವಣೆಗೊಂಡರು. ಪಠ್ಯ ಕೈಬಿಟ್ಟ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಾಲೆಗೆ ಕಾಪು ಡಿಡಿಪಿಐ ಬಂದು ಮಾಹಿತಿಯನ್ನು ಪಡೆದುಕೊಂಡರು. ಇದು ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಮಳೆಗಾಲದ ರಜೆ ಇದ್ದ ಕಾರಣ ಪಾಠವನ್ನು ಮಧ್ಯಾವಧಿ ನಂತರ ನಡೆಸಲು ಯೋಜಿಸಲಾಗಿತ್ತು. ಸಿಲೆಬಸ್ ನಲ್ಲಿರುವ ಪಾಠ ಕೈ ಬಿಡುವ ಪ್ರಶ್ನೆಯೇ ಇಲ್ಲ, ಹೆಚ್ಚುವರಿ ತರಗತಿ ಮಾಡಿ ಪಾಠ ಮಾಡುತ್ತೇವೆ ಎಂದು ಆಡಳಿತ ಮಂಡಳಿ ಹೇಳಿದೆ.
ಸಮಾಜಶಾಸ್ತ್ರ ಶಿಕ್ಷಕಿಯಿಂದ ಈ ಬಗ್ಗೆ ಸ್ಪಷ್ಟನೆ ಪಡೆಯುವುದಾಗಿ ಶಾಲಾ ಮುಖ್ಯೋಪಾಧ್ಯಾಯರು ಹೇಳಿದ್ದಾರೆ. ಶಿಕ್ಷಕಿ ವಿರುದ್ಧ ಕ್ರಮ ಆಗಬೇಕು ಎಂಬುದು ಹಿಂದೂ ಸಂಘಟನೆಗಳ ಒತ್ತಾಯವಾಗಿದೆ.
PublicNext
17/09/2024 05:32 pm