ಬೆಂಗಳೂರು/ಹುಬ್ಬಳ್ಳಿ: ಸೆಪ್ಟೆಂಬರ್ 15 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಈ ದಿನವನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಇತರ ಇಲಾಖೆಗಳ ಸಹಭಾಗಿತ್ವದಲ್ಲಿ ಆಚರಿಸಲು ಸಜ್ಜುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಕರೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು,ಈ ಹಿಂದೆ 'ಸಂವಿಧಾನ ಪೀಠಿಕೆ'ಯನ್ನು ಓದುವ ಮೂಲಕ ಕನ್ನಡ ನಾಡಿನಲ್ಲಿ ಚರಿತ್ರೆ ನಿರ್ಮಿಸಿತು. ಹಾಗೆಯೇ ರಾಷ್ಟ್ರ ಮತ್ತು ಹಲವು ದೇಶ-ವಿದೇಶಗಳ ಪ್ರಶಂಶೆಯನ್ನು ಪಡೆಯಿತು. ಈಗ ಇದೇ 15ನೇ ತಾರೀಖಿನಂದು 'ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ' ದಿನಾಚರಣೆ'ಯನ್ನು ವಿಶ್ವವೇ ಗಮನ ಸೆಳೆಯುವ ಮಾದರಿಯಲ್ಲಿ ರೂಪಿಸಿದೆ. ಮಾನ್ಯ ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಾನ್ಯ ಡಾ. ಹೆಚ್.ಸಿ. ಮಹದೇವಪ್ಪ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ದಿನವನ್ನು ಅರ್ಥಪೂರ್ಣಗೊಳಿಸುವ ಹೊಣೆ ನಮ್ಮೆಲ್ಲರದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಮಸ್ತ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಹಾಗೂ ಇತರೆ ಇಲಾಖೆಗಳ ಎಲ್ಲರ ಪರಿಶ್ರಮದ ಜೊತೆಗೆ ಕೈಜೋಡಿಸಬೇಕು. ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಬಗ್ಗೆ ನೀಡಿರುವ ಸಂದೇಶ ಮತ್ತು ಚಿಂತನೆಗಳನ್ನು ಅಂದು ನಾವೆಲ್ಲ ಸೇರಿ ಸ್ಮರಿಸಬೇಕು. ನಮ್ಮ ದೇಶದ ಸಂವಿಧಾನವನ್ನು ಗೌರವಿಸುವ ಮೂಲಕ ದೇಶದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕು. ನಮ್ಮ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಅಂದು ಓದುವ ಮೂಲಕ ದೇಶಕ್ಕಾಗಿ ನಮ್ಮ ಬದ್ಧತೆಯನ್ನು ಸಮರ್ಪಿಸಬೇಕು ಎಂದು ಕರೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/09/2024 05:28 pm