ಕುಂದಾಪುರ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಳೆದ ಮೂರು ವರ್ಷಗಳಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಜಮೆ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಮಂಗಳವಾರ ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರ ಮಕ್ಕಳು ಕುಂದಾಪುರ ಶಾಸಕರ ಕಚೇರಿ ಎದುರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ನೀಡಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸುರೇಶ್ ಕಲ್ಲಾಗರ ಆಗ್ರಹಿಸಿದರು. 2021-22 ಹಾಗೂ 2022-23 ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೊಡಬೇಕಾದ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಹಲವು ರೀತಿಯ ಹೋರಾಟಗಳನ್ನು ನಮ್ಮ ಸಂಘದಿಂದ ನಡೆಸಲಾಗಿದೆ ಈ ಬಗ್ಗೆ ಮಂಡಳಿ ಹಾಗೂ ಕಾರ್ಮಿಕ ಸಚಿವರು ನಮ್ಮ ಸಂಘಟನೆ ಜೊತೆ ಮಾತುಕತೆ ನಡೆಸಿ ಬಿಡುಗಡೆ ಮಾಡುವುದಾಗಿಯೂ ಭರವಸೆಯನ್ನೂ ನೀಡಿದ್ದಾರೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದು ವಿಳಂಭ ಧೋರಣೆ ಅನುಸರಿಸಲಾಗುತ್ತಿದೆ. ಕಾರ್ಮಿಕ ಸಚಿವರು ಬೋಗಸ್ ಕಾರ್ಡ್ ನೆಪವೊಡ್ಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ದೂರಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪಲ್ಲವಿ,ಶ್ರೇಯಲ್ ಎಸ್, ಸಮೀರ್,ಭೂಮಿಕ ಕೆ ಪೂಜಾರಿ ಮೊದಲಾದವರಿದ್ದರು. ಸಂಘದ ಉಪಾಧ್ಯಕ್ಷ ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ, ಕೃಷ್ಣ ಪೂಜಾರಿ, ಶಶಿಕಾಂತ್ ಎಸ್ ಕೆ, ವಿಜೇಂದ್ರ ಕೋಣಿ, ಸುಧೀರ್ ಪೂಜಾರಿ ಮೊದಲಾದವರಿದ್ದರು.
Kshetra Samachara
11/09/2024 03:59 pm