ಧಾರವಾಡ: ಧಾರವಾಡದ ಸೂಪರ್ ಮಾರುಕಟ್ಟೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಪಾಲಿಕೆ ಆಡಳಿತಾರೂಢ ಪಕ್ಷದ ಇತರ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಶುಕ್ರವಾರ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಪರ್ ಮಾರುಕಟ್ಟೆಯಲ್ಲಿ ರೂಪ್ ಹಾಕಿಕೊಡಲು ಕೆಲ ವರ್ಷಗಳ ಹಿಂದೆಯೇ ಪಾಲಿಕೆಯವರು ಹಣ ವಸೂಲಿ ಮಾಡಿದ್ದರೂ ತಮಗೆ ರೂಪ್ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವ್ಯಾಪಾರಕ್ಕೆ ಕಟ್ಟೆಯ ವ್ಯವಸ್ಥೆ ಮಾಡಿಲ್ಲ. ಪ್ರತಿಯೊಬ್ಬ ವ್ಯಾಪಾರಿಯೂ ಹಣ ಕೊಟ್ಟಿದ್ದು ಮೇಲ್ಛಾವಣಿಯ ವ್ಯವಸ್ಥೆ ಮಾಡಿಲ್ಲ ಎಂದು ವ್ಯಾಪಾರಸ್ಥರು ಪಾಲಿಕೆ ಆಯುಕ್ತರು ಹಾಗೂ ಮೇಯರ್ ಜೊತೆ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.
ಗದಗ, ಬೆಳಗಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಮಾರುಕಟ್ಟೆಯನ್ನು ಚೆನ್ನಾಗಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲಿಯೂ ಮಾರುಕಟ್ಟೆ ಮಾಡುವ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಶೀಘ್ರ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮೇಯರ್ ರಾಮಣ್ಣ ಬಡಿಗೇರ ಹೇಳಿದರು.
ಧಾರವಾಡದ ಮಾರುಕಟ್ಟೆಯಲ್ಲಿ ಅನೇಕ ಸವಲತ್ತುಗಳು ಬೇಕು ಎಂದು ವ್ಯಾಪಾರಸ್ಥರು ಒತ್ತಾಯ ಮಾಡುತ್ತಿದ್ದಾರೆ. ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕೂಡ ಮಾರುಕಟ್ಟೆಯಲ್ಲಿ ಬೇಕು ಎಂಬ ಬೇಡಿಕೆ ಇದ್ದು ಈ ಸಂಬಂಧ ಡಿಪಿಆರ್ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.
ಒಟ್ಟಾರೆ ಸೂಪರ್ ಮಾರುಕಟ್ಟೆಗೆ ಎರಡೂ ಪಕ್ಷದ ನಾಯಕರು ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅದನ್ನು ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದ್ದು, ಈ ಕಾರ್ಯ ಇನ್ನು ಎಷ್ಟು ವರ್ಷಕ್ಕೆ ಕೈಗೂಡುತ್ತದೆಯೋ ಕಾದು ನೋಡಬೇಕಿದೆ.
Kshetra Samachara
06/09/2024 02:36 pm