ಕುಂದಗೋಳ: ಅತಿವೃಷ್ಟಿ ನಡುವೆ ರೈತ ಬೆಳೆದ ಹೆಸರು ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಖರೀದಿ ಕೇಂದ್ರ ಈಗಾಗಲೇ ತೆರೆದು ಅರ್ಜಿ ಪಡೆಯುವ ಪ್ರಕ್ರಿಯೆ ನಡೆದಿದೆ.
ಕುಂದಗೋಳ ಪಟ್ಟಣದ ಎಪಿಎಂಸಿ ಆವರಣದ ಕಟ್ಟಡದಲ್ಲಿ ಆಗಸ್ಟ್ 24ರಿಂದ ಹೆಸರು ಮಾರಾಟದ ಅರ್ಜಿ ಪಡೆಯುವ ಪ್ರಕ್ರಿಯೆ ನಡೆದಿದ್ದು, ಇಲ್ಲಿಯವರೆಗೆ 17 ಅರ್ಜಿಗಳು ಸಲ್ಲಿಕೆಯಾಗಿವೆ.
ಪ್ರಸ್ತುತ ಹೆಸರು ಖರೀದಿಗೆ ನೋಂದಣಿ ಮಾಡಿಸಲು ಸೆಪ್ಟೆಂಬರ್ 7 ಕೊನೆ ದಿನವಾಗಿದ್ದು, ಖರೀದಿಗೆ ಅಕ್ಟೋಬರ್ 21ರ ವರೆಗೂ ಅವಕಾಶ ನೀಡಲಾಗಿದೆ.
ಸದ್ಯ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಖರೀದಿಗೆ 12% ತೇವಾಂಶವನ್ನು ಖರೀದಿ ಕೇಂದ್ರ ನಿಗದಿ ಪಡಿಸಿದ್ದು, ರೈತರ ಹೆಸರು ಬೆಳೆ 16% ರಿಂದ 18% ತೇವಾಂಶ ಹೊಂದಿದೆ.
ಈ ಕಾರಣದಿಂದ ರೈತ, ದೇವರಿಗೆ ಕೈ ಮುಗಿದು "ಬಿಸಿಲು ನೀಡು ದೇವರೇ..." ಎಂದು ಬೇಡುವ ಸ್ಥಿತಿ ಬಂದಿದೆ.
ಒಟ್ಟಾರೆ ಅನ್ನದಾತನ ಅನುಕೂಲಕ್ಕಾಗಿ ತೆರೆದ ಬೆಂಬಲ ಬೆಲೆ ಯೋಜನೆಯ ಹೆಸರು ಖರೀದಿ ಕೇಂದ್ರದ ಲಾಭ ರೈತರಿಗೆ ಸಿಗಬೇಕಾದರೆ ವರುಣ ದೇವ ತಣ್ಣಗಾಗಿ ಸೂರ್ಯ ದೇವ ಪ್ರಜ್ವಲಿಸಬೇಕಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
04/09/2024 04:38 pm