ಹಾವೇರಿ: ಗುರುವಾರ ಮುಂಜಾನೆ ನೀರಲ್ಲಿ ಕೊಚ್ಚಿಹೋಗಿ ಬಾಲಕ ಸಾವನ್ನಪ್ಪಿದ ಘಟನೆಯಿಂದ ಹಾವೇರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಗುರುವಾರ ಮುಂಜಾನೆ 10 ವರ್ಷದ ಬಾಲಕ ನಿವೇದನ ಕೊಚ್ಚಿಹೋಗಿ ಸಾವನ್ನಪ್ಪಿದ ಕಾಲುವೆಯಲ್ಲಿ ಹೆಚ್ಚಿನ ಅನಾಹುತವಾಗದಂತೆ ದುರಸ್ತಿ ಕಾರ್ಯ ಕೈಗೊಂಡಿದೆ. ಶುಕ್ರವಾರ ಮುಂಜಾನೆಯಿಂದಲೇ ಜೆಸಿಬಿ ಸಹಾಯದಿಂದ ಹಾವೇರಿ ನಗರದ ನೀರಿನ ಅವಗಡಗಳಿಗೆ ಕಾರಣವಾಗಿರುವ ಹಳೇ ಪಿಬಿ ರಸ್ತೆಯ ಅಕ್ಕಪಕ್ಕದ ಕಾಲುವೆಗಳ ಮೇಲೆ ಸರಿಯಾಗಿ ಕಲ್ಲು ಹಾಕಿಸುವ ಕಾರ್ಯ ಮಾಡಲಾಯಿತು.
ಅಲ್ಲದೆ ಕಲ್ಲುಗಳಿಲ್ಲದೆ ಅನಾಹುತಗಳಿಗೆ ಆಹ್ವಾನ ನೀಡುತ್ತಿರುವ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಎಚ್ಚರಿಕೆಯ ಫಲಕ ಹಾಕಲಾಗಿದೆ. ಕಲ್ಲುಗಳಿಲ್ಲದೆ ಖಾಲಿ ಖಾಲಿಯಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕಲಾಯಿತು. ಈ ಮಧ್ಯೆ ಹಾವೇರಿ ನಗರಸಭೆ ಅವಗಡಕ್ಕೆ ಕಾರಣವಾಗುತ್ತಿರುವ ರಾಜಕಾಲುವೆಯ ಒತ್ತುವರಿಯ ತೆರವಿಗೆ ಮುಂದಾಗಿದೆ.
ರಾಜಕಾಲುವೆ ಹಾದು ಹೋಗಿರುವ ಕಡೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು. ರಾಜಕಾಲುವೆಗೆ ಅಡ್ಡಬಂದಿರುವ ಗಿಡಗಂಟಿಗಳನ್ನು ಕತ್ತರಿಸಲಾಯಿತು. ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮತ್ತು ನಗರಸಭೆ ಸದಸ್ಯೆ ಚೆನ್ನಮ್ಮ ರಾಜಕಾಲುವೆ ಸ್ವಚ್ಛತೆ ಕಾರ್ಯದ ನೇತೃತ್ವವಹಿಸಿದ್ದರು. ಅಧಿಕಾರಾವಧಿಯಲ್ಲಿ ಹಾವೇರಿ ನಗರವನ್ನು ರಾಜಕಾಲುವೆ ಒತ್ತುವರಿಯಿಂದ ರಕ್ಷಿಸಿ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನ ನಗರಸಭೆ ಅಧ್ಯಕ್ಷೆ ಶಶಿಕಲಾ ನೀಡಿದರು.
PublicNext
19/10/2024 10:31 am