ನವದೆಹಲಿ: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತೊಮ್ಮೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಈ ಬಾರಿ ದೇಶದ ಇತಿಹಾಸದಲ್ಲಿ ಶತಮಾನಗಳಿಂದ ಕಾಡಿದ್ದ ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ತೀರ್ಪಿನ ವಿಚಾರವಾಗಿ ಮಾತನಾಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು. ಪುಣೆಯ ಖೇಡ್ ತಾಲೂಕಿನಲ್ಲಿರುವ ತಮ್ಮ ಹುಟ್ಟೂರು ಕಾನ್ಹೆಸಾರ್ ಗ್ರಾಮದಲ್ಲಿ ಭಾನುವಾರ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಡಿವೈ ಚಂದ್ರಚೂಡ್ ಅವರು, 'ಕೆಲ ಅಪರೂಪದ ಪ್ರಕರಣಗಳಲ್ಲಿ ನಾವು ಪರಿಹಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಮೂರು ತಿಂಗಳ ಕಾಲ ನಮ್ಮ ಪೀಠದ ಮುಂದೆ ಇದ್ದಾಗ ಇದೇ ರೀತಿಯ ಘಟನೆ ಸಂಭವಿಸಿದೆ. ನಾನು ದೇವರ ಮುಂದೆ ಕುಳಿತುಕೊಂಡೆ ಮತ್ತು ದೇವರೇ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದೆ. ನನ್ನನ್ನು ನಂಬಿರಿ, ನಿಮಗೆ ನಂಬಿಕೆ ಇದ್ದರೆ, ದೇವರು ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ" ಎಂದು ಹೇಳಿದ್ದರು.
ಡಿವೈ ಚಂದ್ರಚೂಡ್ ಅವರ ಈ ಹೇಳಿಗೆ ವಿಪಕ್ಷಗಳು ಫುಲ್ ಗರಂ ಆಗಿವೆ. 'ವಿವಾದಗಳನ್ನು ಕಾನೂನು, ಸಂವಿಧಾನದ ಪ್ರಕಾರ ಇತ್ಯರ್ಥಪಡಿಸಬೇಕೇ ಹೊರತು ದೇವರ ಮುಂದೆ ಪ್ರಾರ್ಥನೆಯಿಂದಲ್ಲ' ಎಂದು ಟೀಕಿಸಿವೆ.
ಯೋಧ್ಯೆ ವಿವಾದದಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದ್ದ ನ್ಯಾಯಪೀಠದಲ್ಲಿ ಡಿವೈ ಚಂದ್ರಚೂಡ್ ಕೂಡ ಭಾಗಿಯಾಗಿದ್ದರು. ಈ ವರ್ಷದ ಜುಲೈನಲ್ಲಿ ಚಂದ್ರಚೂಡ್ ಅವರು ರಾಮಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದರು.
ಇತ್ತೀಚೆಗೆ ಡಿವೈ ಚಂದ್ರಚೂಡ್ ಅವರ ನಿವಾಸದಲ್ಲಿ ಆಚರಿಸಿದ ಗಣೇಶ ಚತುರ್ಥಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿರುವುದು ಭಾರಿ ರಾಜಕೀಯ ಕೋಲಾಹಲ ಸೃಷ್ಟಿಸಿತ್ತು.
PublicNext
21/10/2024 09:27 pm