ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ತಾಲ್ಲೂಕಿನ ಹೆಚ್ ಕ್ರಾಸ್ ಗ್ರಾಮದ ನಿವಾಸಿ ಬಸವಲಿಂಗಮ್ಮ ಅವರು 25 ಸೆಪ್ಟೆಂಬರ್ 2024 ರಂದು ಮಧ್ಯಾಹ್ನ ಸಮಯ 12:30 ರ ವೇಳೆಯಲ್ಲಿ ವಿಜಯಪುರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಯಾರೋ ಒಬ್ಬ ಆಸಾಮಿ ತಾವು ಸಿಐಡಿ ಪೊಲೀಸರು, ಕಳ್ಳರು ಇದ್ದಾರೆ,ನೀವು ಕತ್ತಿನಲ್ಲಿ ಹಾಕಿರುವ ಬಂಗಾರದ ಸರವನ್ನು ಬಿಚ್ಚಿ ಒಳಗಡೆ ಇಟ್ಟುಕೊಂಡು ಹೋಗಿ ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಮಹಿಳೆ, ಚಿನ್ನದ ಸರವನ್ನು ತೆಗೆದಾಗ ಅದನ್ನು ಪೇಪರ್ ನಲ್ಲಿ ಸುತ್ತಿಕೊಡುವುದಾಗಿ ನಂಬಿಸಿ ಪೇಪರ್ ನಲ್ಲಿ ಕಲ್ಲುಗಳು ಇಟ್ಟು ಮಹಿಳೆಗೆ ನೀಡಿ ಸುಮಾರು 33 ಗ್ರಾಂ ಚಿನ್ನದ ಸರವನ್ನು ಎಗರಿಸಿ ವಂಚನೆ ಮಾಡಿದ್ದ ಆರೋಪಿಯನ್ನು ಮಾಲು ಸಹಿತ ಶಿಡ್ಲಘಟ್ಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ. ರವರ ನೇತೃತ್ವದ ತಂಡ ತನಿಖೆಯನ್ನು ಕೈಗೊಂಡು ವಂಚನೆ ಪ್ರಕರಣದಲ್ಲಿ ಕುಖ್ಯಾತ ಇರಾನಿ ಗ್ಯಾಂಗ್ ನ ಸದಸ್ಯ ಸಾದುಲ್ಲಾ ಜಪಾರಿ ಎಂಬ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಆರೋಪಿಯು ಮಹಾರಾಷ್ಟ್ರ ನಿವಾಸಿಯಾಗಿದ್ದು, ಪ್ರಸ್ತುತ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದಾನೆ. ಆರೋಪಿ ಬಳಿಯಿದ್ದ 16 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ ಸುಮಾರು 4 ಲಕ್ಷ ಬೆಲೆ ಬಾಳುವ 33 ಗ್ರಾಂ ಬಂಗಾರದ ಒವಡೆಗಳು ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
PublicNext
01/02/2025 02:26 pm