ಕೋಲಾರ : ಕೋಲಾರ ನಗರದಲ್ಲಿ ಕಳೆದ 2 ತಿಂಗಳಿಂದ ಅಂಗಡಿಗಳ ರೋಲಿಂಗ್ ಶಟರ್ ಒಡೆದು ಹಣ ಕಳವು ಮಾಡುತ್ತಾ ಸಾರ್ವಜನಿಕರು ಮತ್ತು ಪೊಲೀಸರ ನಿದ್ದೆಗೆಡಿಸಿದ್ದ ಹಾಗೂ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮರನ್ನು ಬಂಧಿಸುವಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ನ್ಯೂ ತಿಪ್ಪಸಂದ್ರ ಸುಧಾಮನಗರದ ಆರ್.ವಿನೋದ್ (19), ಜ್ಯೋತಿನಗರ ರೆಡ್ಡಿಪಾಳ್ಯದ ಆಟೊ ಚಾಲಕ ಎಫ್.ರಿಯಾನ್ (19) ಹಾಗೂ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಮನಗರದ ಎಸ್.ಪ್ರವೀಣ್ಕುಮಾರ್ (19) ಬಂಧಿತ ಆರೋಪಿಗಳಾಗಿದ್ದಾರೆ. ಮೂವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇವರೊಟ್ಟಿಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಕೆಜಿಎಫ್ ಪರಿವೀಕ್ಷಣಾಲಯದಲ್ಲಿ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಜ.28ರ ಮಧ್ಯರಾತ್ರಿ ಕೋಲಾರದ ಕೋಗಿಲಹಳ್ಳಿ ದರ್ಗಾ ಬಳಿಯ ಪಂಪ್ಹೌಸ್ ಸಮೀಪ ಹೈವೇ ಸರ್ವೀಸ್ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ 3 ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಕೈಗಳಲ್ಲಿ ತಲ್ವಾರ್, ಚಾಕುಗಳು, ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ ಆಯುಧಗಳು ಹಾಗೂ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಮೇಲೆ ವಿವಿಧ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ಇವೆ ಎಂಬುದು ಗೊತ್ತಾಗಿದೆ.ದಾಳಿಯಲ್ಲಿ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಸದಾನಂದ, ಪಿಎಸ್ಐ ಹೊನ್ನೇಗೌಡ ನೇತೃತ್ವದ ಸಿಬ್ಬಂದಿಗೆ ಎಸ್ಪಿ ನಿಖಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Kshetra Samachara
31/01/2025 02:14 pm