ತಿರುವನಂತಪುರಂ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಶುಕ್ರವಾರ 45 ವರ್ಷದ ಬುಡಕಟ್ಟು ಮಹಿಳೆ ರಾಧಾ ಅವರನ್ನು ಹುಲಿಯೊಂದು ಕೊಂದಿದೆ.
ರಾಧಾ ಅವರು ಕೇರಳ ಅರಣ್ಯ ಇಲಾಖೆಯ ತಾತ್ಕಾಲಿಕ ವೀಕ್ಷಕರ ಪತ್ನಿ ಮತ್ತು ಭಾರತೀಯ ಕ್ರಿಕೆಟಿಗ ಮಿನ್ನು ಮಣಿಯ ಚಿಕ್ಕಮ್ಮ. ಇದೀಗ ನರಭಕ್ಷಕ ಹುಲಿಯ ಸೆರೆ ಇಲ್ಲವೇ ಗುಂಡಿಕ್ಕಿ ಸಾಯಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
"ಅಧಿಕಾರಿಗಳು ಸಾಧ್ಯವಾದಷ್ಟು ಬೇಗ ಹುಲಿಯನ್ನು ಸೆರೆಹಿಡಿಯುತ್ತಾರೆ. ಆ ಪ್ರದೇಶದ ಜನರ ಜೀವ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಮಿನ್ನು ಹೇಳಿದ್ದಾರೆ.
ಮೀನ್ಮುಟ್ಟಿ ನಿವಾಸಿಯಾಗಿರುವ ರಾಧಾ ಅವರು ಬೆಳಿಗ್ಗೆ ಕಾಫಿ ಬೀಜ ಕೊಯ್ಯುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಗೆ ರಾಧಾ ಬಲಿಯಾದ ಘಟನೆ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು, ಕೇರಳ ಸರಕಾರದ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ.
ವಯನಾಡು ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಸ್ತುತ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರವಾಗಿದೆ. ಈ ಹಿಂದೆಯೂ ಆನೆ ದಾಳಿ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದ ಹಲವು ಜೀವಗಳು ಬಲಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೇರಳ ಸರಕಾರ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
PublicNext
25/01/2025 02:09 pm