ಉಡುಪಿ: ವಾರಗಳ ಕಾಲ ನಡೆದ ಕರ್ನಾಟಕ ರಾಜ್ಯ ಕ್ರೀಡಾಕೂಟ 2025ಕ್ಕೆ ಅದ್ದೂರಿ ತೆರೆ ಬಿದ್ದಿದೆ. ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ರಾಜ್ಯದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಜನವರಿ 17 ರಿಂದ ಜನವರಿ 23ರ ವರೆಗೆ ಏಳು ದಿನಗಳ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಈ ಬಾರಿಯ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟ ಉದ್ಘಾಟನೆ ಮಾಡಿದ್ದು, ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು. ಏಳು ದಿನಗಳ ಕ್ರೀಡಾಕೂಟದಲ್ಲಿ ಎಲ್ಲಾ ವಿಭಾಗಗಳಲ್ಲಿ ಗೆದ್ದ ಕ್ರೀಡಾಳುಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಕರಾವಳಿಯ ಜನಪದ ಕಲಾ ತಂಡಗಳು ಕ್ರೀಡಾಕೂಟದ ಸಮಾರೋಪದ ಮೆರುಗನ್ನು ಹೆಚ್ಚಿಸಿದವು.
ಕ್ರೀಡೆ ಒಂದು ಧ್ಯಾನವಿದ್ದಂತೆ. ನಮ್ಮ ಜ್ಞಾನಾಭಿವೃದ್ಧಿಗೆ ಕ್ರೀಡೆ ಸಹಕಾರಿಯಾಗಬಲ್ಲದು. ರಾಜ್ಯ ಸರ್ಕಾರ ಕ್ರೀಡಾ ಇಲಾಖೆಗೆ ಪ್ರೋತ್ಸಾಹ ನೀಡುತ್ತಿದ್ದು, ಭಾರತ ಸರ್ಕಾರ ಕೂಡ ಎಲ್ಲಾ ರೀತಿಯ ಸಹಕಾರ ನೀಡುತ್ತದೆ. ತಾಲೂಕು ಮತ್ತು ಜಿಲ್ಲಾಮಟ್ಟದಲ್ಲೂ ಆರು ತಿಂಗಳಿಗೊಂದು ಕ್ರೀಡಾಕೂಟ ನಡೆಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಸಲಹೆ ನೀಡಿದರು.
ಕ್ರೀಡಾ ಕ್ಷೇತ್ರದಲ್ಲಿರುವವರು ಮದ್ಯ ಮತ್ತು ಮಾದಕ ವ್ಯಸನದಿಂದ ಮುಕ್ತರಾಗಿರುತ್ತಾರೆ. ಶಿಕ್ಷಕರು ಪೋಷಕರು ಮಕ್ಕಳಲ್ಲಿ ಕ್ರೀಡಾಮನೋಭಾವನೆಯನ್ನು ಬೆಳೆಸಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸಲಹೆ ನೀಡಿದರು. ಕ್ರೀಡಾ ಕೂಟದ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
PublicNext
24/01/2025 08:16 am