ಚಾಮರಾಜನಗರ : ಹನೂರು ತಾಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದ ರಸ್ತೆಯಲ್ಲಿ ತೆರಳುತ್ತಿದ್ದ ಇಬ್ಬರು ಕೂಲಿಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ, ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಪ್ಪ ಗ್ರಾಮದ ಮುನಿಯಪ್ಪ(40) ಮೃತರು. ಕುಳ್ಳುಚ್ಚ ಗಾಯಗೊಂಡವರು. ಸ್ನೇಹಿತರಾದ ಮುನಿಯಪ್ಪ ಹಾಗೂ ಕುಳ್ಳುಚ್ಚ ಒಡೆಯರಪಾಳ್ಯ ಗ್ರಾಮದ ಜಮೀನೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಾರ್ಯನಿಮಿತ್ತ ಕೊಪ್ಪಕ್ಕೆ ಬಂದು ನಂತರ ವಾಪಸ್ ಒಡೆಯರಪಾಳ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಅರಣ್ಯದಲ್ಲಿ ಕಾಡಾನೆ ಇವರಿಬ್ಬರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಮುನಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಳ್ಳುಚ್ಚ ಪ್ರಜ್ಞೆ ತಪ್ಪಿ ಅರಣ್ಯದಲ್ಲಿಯೇ ಬಿದ್ದಿದ್ದರು.
ಅರಣ್ಯ ಪ್ರದೇಶದ ಸಿಬ್ಬಂದಿ ಇದನ್ನು ಗಮನಿಸಿ ಗಸ್ತಿನಲ್ಲಿದ್ದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಗಾಯಗೊಂಡು ಪ್ರಜ್ಞೆ ಇಲ್ಲದೆ ಬಿದ್ದಿದ್ದ ಕುಳ್ಳುಚ್ಚ ಅವರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕುಳ್ಳುಚ್ಚ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
Kshetra Samachara
22/01/2025 06:49 pm