ಕಟಪಾಡಿ: ಕಟಪಾಡಿ ಶಿರ್ವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಪೂರ್ತಿ ಹೊಂಡ ಗುಂಡಿಯಾಗಿದೆ. ಈ ರಸ್ತೆಯಲ್ಲಿ ನಿತ್ಯ ವಾಹನ ಸವಾರರು ಪರದಾಡುತ್ತಿದ್ದಾರೆ. ಬೇಸತ್ತ ಈ ಭಾಗದ ಜನ ರಸ್ತೆ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.
ಕಟಪಾಡಿ - ಕುರ್ಕಾಲು - ಶಂಕರಪುರದಿಂದ ಶಿರ್ವ ಸಂಪರ್ಕಿಸುವ ರಸ್ತೆ ಹದಗೆಟ್ಟು ಹಲವು ತಿಂಗಳುಗಳಾಗಿವೆ. ಇದರಿಂದಾಗಿ ನಿತ್ಯ ಸಂಚರಿಸುವ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿ ಪ್ರಕಟಗೊಂಡಿದ್ದರೂ ದಪ್ಪ ಚರ್ಮದ ಅಧಿಕಾರಿಗಳು ಇತ್ತ ಕಡೆ ಗಮನಹರಿಸುತ್ತಿಲ್ಲ. ಕನಿಷ್ಠ ಹೊಂಡ ಮುಚ್ಚುವ ಕಾರ್ಯಕ್ಕೂ ಮುಂದಾಗುತ್ತಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ಇಂದು ಬೆಳ್ಳಂಬೆಳಗ್ಗೆ ರಸ್ತೆ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ತಮ್ಮ ಆಕ್ರೋಶ ಮತ್ತು ಸಿಟ್ಟನ್ನು ಹೊರಹಾಕಿದ್ದಾರೆ. ಸಂಸದರು ಶಾಸಕರು ಕೂಡಲೇ ಇತ್ತ ಗಮನ ಹರಿಸಿ, ಈ ರಸ್ತೆಯನ್ನು ಸರಿಪಡಿಸಬೇಕಾಗಿದೆ. ಈ ಮೊದಲು ಇಲ್ಲಿನ ರಸ್ತೆ ಗುಂಡಿ ಬಗ್ಗೆ ಸಾಂಗ್ ವೈರಲ್ ಆಗಿತ್ತು.ಆದರೂ ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಇಲ್ಲಿ ನೆಟ್ಟಿರುವ ಬಾಳೆ ಗೊನೆಬಿಡುವ ಮೊದಲು ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ಈ ರಸ್ತೆಯನ್ನೂ ರಿಪೇರಿ ಮಾಡಬೇಕಾಗಿದೆ.
Kshetra Samachara
21/10/2024 02:51 pm