ಮುಲ್ಕಿ:ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ, ಗಡಿಪ್ರಧಾನರಾಗಿದ್ದ ಕಾಂತುಲಕ್ಕಣ ಯಾನೆ ಪಟೇಲ್ ಯಾದವ ಜಿ. ಬಂಗೇರ (73) ಅವರು ಅ. 19ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿಯನ್ನು ಅಗಲಿದ್ದಾರೆ.
2005ಕ್ಕೂ ಮುನ್ನ ಹಲವು ವರ್ಷ ಮುಂಬಯಿಯಲ್ಲಿ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿದ್ದ ಅವರು ಅನಂತರ ಸಸಿಹಿತ್ಲುವಿಗೆ ಆಗಮಿಸಿ ಗಡಿಪ್ರಧಾನವಾದ ಬಳಿಕ ಊರಿನ ಗುರಿಕಾರರಾಗಿದ್ದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದರು.
ಬ್ರಿಟಿಷರ ಕಾಲದ ರಾಜ ಮುದ್ರೆಯ ಉಂಗುರ, ಖಡಗ ಹೊಂದಿರುವ ಬಂಗೇರ ಅವರ ಅಂತಿಮ ವಿಧಿ ವಿಧಾನ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು. ಜಿಲ್ಲಾಡಳಿತದ 'ಸೂಚನೆ ಪ್ರಕಾರ ಸಹಾಯಕ ತಹಶೀಲ್ದಾರ್ ಅವರು ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಪ್ರದಾಯದ ಪ್ರಕಾರ ಕಾಂತು ಲಕ್ಕಣ ಮನೆತನದ ಯಾದವ ಜಿ. ಬಂಗೇರ ಅವರಿಗೆ ಪರಂಪರಾಗತವಾಗಿ ಬ್ರಿಟಿಷರ ಕಾಲದಿಂದ ಬಂದಿರುವ ರಾಜ ಮುದ್ರೆಯ ಉಂಗುರ, ಖಡಗವನ್ನು ತೆಗೆಯುವ ಕ್ರಮವನ್ನು ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್ ಅವರು ನೆರವೇರಿಸಿ ಅನಂತರ ಅಂತಿಮ ಸಂಸ್ಕಾರಕ್ಕೆ ಅನುವು ಮಾಡಿಕೊಡಲಾಯಿತು.
ಮುಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರ ಪುತ್ರ ಗೌತಮ್ ಜೈನ್, ಪೊಯ್ಯದಗುಡ್ಡೆ ದೇವಸ್ಥಾನದ ರಂಗನಾಥ್ ಭಟ್, ಶಾಸಕ ಉಮಾನಾಥ ಕೋಟ್ಯಾನ್, ಖಂಡೇವು ಬೂಡಿನವರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
Kshetra Samachara
21/10/2024 10:07 am