ಮಾಗಡಿ : ತಾಲ್ಲೂಕಿನ ಕುದೂರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಹಲಸಿನ ಮರದ ಕೆಳಭಾಗದ ಕೊಂಬೆಗೆ ಬೆಳೆದಿದ್ದ ಹಲಸಿನಕಾಯಿಯನ್ನು ಕಿತ್ತುಕೊಳ್ಳಲು ಹೋದಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಲಕ್ಕೇನಹಳ್ಳಿ ಗ್ರಾಮದ ರೈತ ಗಂಗಾಧರ್ ಎಲ್.ಎಸ್ (42) ಮೃತಪಟ್ಟವರು, ವಿದ್ಯುತ್ ಶಾಕ್ ತಗುಲಿ ಒದ್ದಾಡುತ್ತಿದ್ದ ಗಂಗಾಧರ್ ಅವರನ್ನು ನೋಡಿದ ರಜತ್ ಎನ್ನುವವರು ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ಬೆಂಗಳೂರಿಗೆ ಹೋಗುವಷ್ಟರಲ್ಲಿ ಗಂಗಾಧರ್ ಮೃತಪಟ್ಟಿದ್ದರು.
ಬೆಸ್ಕಾಂ ನಿರ್ಲಕ್ಷ್ಯ: ಲಕ್ಕೇನಹಳ್ಳಿ ಗ್ರಾಮದ ಜಮೀನಿನಲ್ಲಿ ಹಾಯ್ದು ಹೋದ ವಿದ್ಯುತ್ ತಂತಿಯು ಮರದ ಮೇಲ್ಭಾಗದ ಕೊಂಬೆಗೆ ತಗುಲಿತ್ತು. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಲವು ಬಾರಿ ತಿಳಿಸಿದ್ದರೂ ನಿರ್ಲಕ್ಷ್ಯ ತೋರಿದ್ದರು. ಹಲಸಿನ ಮರಕ್ಕೆ ವಿದ್ಯುತ್ ಪ್ರವಾಹವಾಗಿ ಗಂಗಾಧರ್ ಸಾವನ್ನಪ್ಪಲು ಬೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಯೇ ಕಾರಣ ಎಂದು ಮೃತರ ತಮ್ಮ ರವಿ ಕುದೂರು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
19/10/2024 07:05 pm