ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಹೆತ್ತ ಮಕ್ಕಳನ್ನೇ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯೇ ಹತ್ಯೆ ಮಾಡಿರುವ ಘಟನೆ ನಗರದ ಗೀತಾ ಮಂದಿರ ಬಡಾವಣೆಯಲ್ಲಿ ನಡೆದಿದೆ. ಕಬಿಲ್(3) ಮತ್ತು ಕಬೀಲನ್ (11ತಿಂಗಳು) ಮೃತ ಮಕ್ಕಳು. ಸ್ವೀಟಿ (21) ಹಾಗೂ ಗ್ರಗೋರಿ ಫ್ರಾನ್ಸೀಸ್(30) ಬಂಧಿತರು. ಐಜೂರು ಠಾಣೆ ಪೊಲೀಸರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ಸ್ವೀಟಿಗೆ ಬೆಂಗಳೂರಿನ ಟ್ಯಾನಿ ರೋಡ್ನ ಎಕೆ ಕಾಲೋನಿ ವಾಸಿ ಶಿವು ಎಂಬುವವರ ಜೊತೆ 4 ವರ್ಷಗಳ ಹಿಂದೆ ಮದುವೆ ಆಗಿತ್ತು. ಸ್ವೀಟಿ ಮನೆ ಕೆಲಸ ಮಾಡುತ್ತಿದ್ದಳು. ಕಳೆದ ಜುಲೈ 30ರಂದು ಸ್ವೀಟಿ ಪತಿ ಶಿವು ಅವರನ್ನು ಬಿಟ್ಟು ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಒಂದೂವರೆ ತಿಂಗಳ ನಂತರ ಒಬ್ಬಳೆ ಮನೆಗೆ ಹಿಂತಿರುಗಿದ ಸ್ವೀಟಿ, ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಹೇಳಿದ್ದಳು. ಶಿವು ಅಲ್ಲಿಂದ ಮಕ್ಕಳನ್ನು ಮನೆಗೆ ಕರೆತಂದಿದ್ದರು. ಮನೆಯಿಂದ ಹೋಗಿದ್ದೇಕೆಂದು ಸ್ವೀಟಿಯನ್ನು ಕೇಳಿದಾಗ, ಬ್ಯಾಂಕಿನಲ್ಲಿಟ್ಟಿದ್ದ ಹಣ ಖರ್ಚು ಮಾಡಿದ್ದೇನೆ. ನೀವು ಏನಾದರು ಮಾಡುತ್ತೀರಿ ಎಂಬ ಭಯದಿಂದ ರಾಮನಗರಕ್ಕೆ ಹೋಗಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲವೆಂದು ಪತಿ ಶಿವು ಅವರಿಗೆ ಹೇಳಿದ್ದಾಳೆ.
ಆನಂತರ ಸ್ವೀಟಿ ತಂದಿದ್ದ ಬ್ಯಾಗ್ ಅನ್ನು ಶಿವು ದೊಡ್ಡಮ್ಮಳ ಮಗಳಾದ ದೀಪಾ ಪರಿಶೀಲಿಸಿದಾಗ ಗ್ರೆಗೊರಿ ಫ್ರಾನ್ಸಿಸ್ ಎಂಬುವರ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅದರಲ್ಲಿದ್ದ ಮೊಬೈಲ್ ನಂಬರ್ಗೆ ಫೋನ್ ಮಾಡಿದಾಗ ಗ್ರೆಗೊರಿ ಫ್ರಾನ್ಸಿಸ್ ತಾನು ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ.
ಸೆಪ್ಟೆಂಬರ್ 15ರಂದು ಸ್ವೀಟಿ ಇಬ್ಬರು ಮಕ್ಕಳೊಂದಿಗೆ ಮತ್ತೆ ಮನೆಯಿಂದ ಹೊರಟು ಹೋಗಿದ್ದಳು. ಶಿವು ಅನುಮಾನಗೊಂಡು ಸೆಪ್ಟೆಂಬರ್ 17ರಂದು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಿದ್ದರು. ಪತ್ನಿ ಮತ್ತು ಮಕ್ಕಳನ್ನು ಹುಡುಕಿಕೊಂಡು ಶಿವು ಅಕ್ಟೋಬರ್ 12ರಂದು ರಾಮನಗರದ ಗೀತಾ ಮಂದಿರ ಬಡಾವಣೆಗೆ ಬಂದಿದ್ದರು. ಪತ್ನಿ ಮತ್ತು ಮಕ್ಕಳ ಫೋಟೋ ತೋರಿಸಿ ವಿಚಾರಿಸಿದಾಗ ಸ್ವೀಟಿ ಮತ್ತು ಗ್ರೆಗೊರಿ ಫ್ರಾನ್ಸಿಸ್ ಬಾಡಿಗೆ ಮನೆಯಲ್ಲಿ ವಾಸ ಇರುವುದು ಗೊತ್ತಾಗಿದೆ. ಈ ವೇಳೆ ಒಂದು ಮಗು ಅಕ್ಟೋಬರ್ 1ರಂದು, ಮತ್ತೊಂದು ಮಗು ಅಕ್ಟೋಬರ್ 7ರಂದು ಮೃತಪಟ್ಟಿರುವುದು ತಿಳಿದು ಬಂದಿದೆ.
PublicNext
14/10/2024 12:18 pm