ಕುಂದಾಪುರ: ಶಾಲಾ ದಾಖಲಾತಿಯನ್ನೇ ತಿದ್ದಿ, ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡು ಪ್ರಮುಖ ಸಮುದಾಯದ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ ಎನ್ನುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ತಹಶೀಲ್ದಾರರು ನೀಡಿರುವ ನಕಲಿ ಜಾತಿ ಪ್ರಮಾಣ ಪತ್ರ ಆದೇಶವನ್ನು ರದ್ದು ಪಡಿಸಿ ಮರುಪರಿಶೀಲನೆ ನಡೆಸುವಂತೆ ಕುಂದಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ನೀಡಿದೆ ಎಂದು ಕೊಂಕಣ ಖಾರ್ವಿ ಸಮುದಾಯದ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಸತೀಶ್ ಖಾರ್ವಿ ಹೇಳಿದ್ದಾರೆ.
ಈ ಹಿಂದೆ ಕುಂದಾಪುರದ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷರಾಗಿದ್ದ ಜಯಾನಂದ ಎಂಬುವರು ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಸತೀಶ್ ಖಾರ್ವಿ ಆರೋಪಿಸಿದ್ದರು. ಅಲ್ಲದೆ, ಈ ಬಗ್ಗೆ ತಹಶೀಲ್ದಾರ್ ಅವರಿಗೂ ದೂರು ನೀಡಿದ್ದರು. ಬಳಿಕ ವಿಚಾರಣೆ ವೇಳೆ ಜಯಾನಂದ, ಶಾಲೆಯಿಂದ ಪಡೆದ ಪ್ರಮಾಣ ಪತ್ರ ನಕಲಿ ಎಂದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಜಯಾನಂದ ಪಡೆದುಕೊಂಡ ಜಾತಿ ಪ್ರಮಾಣ ಪತ್ರಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿ ಪ್ರಕರಣವನ್ನು ಸಕ್ಷಮ ಪ್ರಾಧಿಕಾರ(ಕುಂದಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ)ಕ್ಕೆ ಸಲ್ಲಿಸುವಂತೆ ಸೂಚಿಸಿದ್ದರು.
ಆದರೆ, ಪ್ರಕ್ರಿಯೆ ನಿಧಾನವಾದ ಕಾರಣ ರಾಜ್ಯ ಲೋಕಾಯುಕ್ತಕ್ಕೂ ಸತೀಶ್ ಖಾರ್ವಿ ದೂರು ನೀಡಿದ್ದರು. ಮಾಧ್ಯಮಗಳ ಮುಂದೆಯೂ ಈ ಪ್ರಕರಣವನ್ನು ಬಹಿರಂಗ ಪಡಿಸಿದ್ದರು. ಸಹಾಯಕ ಕಮಿಷನರ್ ವಿಚಾರಣೆ ನಡೆಸಿ ಜಾತಿಗೆ ಸಂಬಂಧಿಸಿದಂತೆ ತಂದೆಯ ಪ್ರಮಾಣಪತ್ರ ಸಲ್ಲಿಸದೇ, ಮಗನ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ತಹಶೀಲ್ದಾರ್ ನೀಡಿದ ಆದೇಶ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ ಎಂದರು. ಸಕ್ಷಮ ಪ್ರಾಧಿಕಾರದ ಆದೇಶವನ್ನು ಸಂಬಂಧಪಟ್ಟ ತಹಶೀಲ್ದಾರರು ತಕ್ಷಣ ಪಾಲಿಸಬೇಕು. ಸುಳ್ಳು ಜಾತಿ ಪ್ರಮಾಣಪತ್ರವನ್ನು ಹಿಂಪಡೆಯಬೇಕು. ಇಲ್ಲದೇ ಇದ್ದಲ್ಲಿ ಹೈಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಸತೀಶ್ ಖಾರ್ವಿ ಎಚ್ಚರಿಸಿದ್ದಾರೆ.
PublicNext
19/10/2024 06:32 pm