ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹೊಸಾಡು ಗ್ರಾಮದ ನಗು ಸಿಟಿ ಜಮೀನಿನಿಂದ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಮೀನಿನ ಪಕ್ಕದಲ್ಲಿರುವ ತಗ್ಗು ಪ್ರದೇಶದಲ್ಲಿರುವ ಕೊಪ್ಪರಿಗೆ ನಿವಾಸಿಗಳು ವಾಸಿಸುವ ಮನೆಗಳಿಗೆ ನೀರು ನುಗ್ಗಿದೆ. ಮನೆಯ ತೋಟ, ಕಾಂಪೌಂಡ್ ಗೋಡೆ, ಎರಡು ಬೈಕ್, ಸಂಪೂರ್ಣ ಹಾನಿಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಖಾಸಗಿ ಜಮೀನಿನ ಮಾಲೀಕರ ವಿರುದ್ಧ ಆಕ್ರೋಶ ಹೊರ ಹಾಕಿದರು .
ಗುರುವಾರ ಬೆಳಿಗ್ಗೆ ಹೊಸಾಡು ಗ್ರಾಮದ ಸಾರ್ವಜನಿಕರು ಎಲ್ಲರೂ ಒಟ್ಟು ಸೇರಿ ಆಗಿರುವ ಅನಾಹುತದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಹಾಗೂ ಖಾಸಗಿ ಜಮೀನಿನ ಮಾಲೀಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದ ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ ಚಂದ್ರ ಹಾಗೂ ಕುಂದಾಪುರ ತಹಸೀಲ್ದಾರ್ ಶುಭಾ ಲಕ್ಷ್ಮಿ ಎಚ್, ರವರು ಮನೆಗಳಿಗೆ ಆಗಿರುವ ಅನಾಹುತದ ಬಗ್ಗೆ ಪರಿಶೀಲನೆ ಮಾಡಿ , ಖಾಸಗಿ ಜಮೀನಿನ ಮಾಲೀಕರ ಜೊತೆ ಮಾತನಾಡಿ ಸೂಕ್ತ ಪರಿಹಾರ ನೀಡುವಂತೆ ಆದೇಶ ಮಾಡಿದರು. ಹಾಗೂ ಮುಂದಿನ ದಿನದಲ್ಲಿ ಸರಕಾರದಿಂದಲೇ ಶಾಶ್ವತ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.
ಖಾಸಗಿ ಜಮೀನಿನ ಮಾಲೀಕರು ಅಧಿಕಾರಿಗಳ ಮಾತಿನಂತೆ ನಡೆಯುತ್ತೇನೆ, ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವ ಭರವಸೆ ನೀಡಿದರು.
ಘಟನಾ ಸ್ಥಳಕ್ಕೆ ಕುಂದಾಪುರ ತಾಲೂಕು ಕಚೇರಿಯ ಅಧಿಕಾರಿ ರಾಮಚಂದ್ರಮಯ್ಯ ಕೊಡಪಾಡಿ, , ಹೊಸಾಡು ಗ್ರಾಮ ಪಂಚಾಯಿತಿನ ಪಿ ಡಿ ಓ, ಹಾಗೂ ಸಿಬ್ಬಂದಿ ಪ್ರದೀಪ್ ಪೂಜಾರಿ ಮುಳ್ಳಿಕಟ್ಟೆ, ಉದ್ಯಮಿ ಗುಂಡು ಶೆಟ್ಟಿ, ಶ್ರೀಧರ್ ಆಚಾರ್ಯ, ರಾಘು ಶೆಟ್ಟಿ, ಸ್ಥಳೀಯ ನಿವಾಸಿಗಳು ಗ್ರಾಮಸ್ಥರು ಹಾಜರಿದ್ದರು.
Kshetra Samachara
17/10/2024 08:50 pm