ಮಂಗಳೂರು: ಒಂಟಿಯಾಗಿದ್ದ ಮಹಿಳೆಯರಿಗೆ ವಂಚಿಸಿ ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ಕೊನೆಗೂ ಅಂದರ್ ಆಗಿದ್ದಾನೆ. ಅಂದ- ಚೆಂದದ ಒಂಟಿ ಮಹಿಳೆಯರೇ ಈತನ ಟಾರ್ಗೆಟ್. ಲವ್ -ಸೆಕ್ಸ್ ಥೆಫ್ಟ್ ಮಾಡಿ ಪರಾರಿಯಾಗುತ್ತಿದ್ದ ಈತನನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದೇ ಒಂದು ಸಾಹಸ.
ಹೌದು... ಈತನ ಹೆಸರು ರೋಹಿತ್ ಮಥಾಯೀಸ್. ಉಡುಪಿ ಜಿಲ್ಲೆ ಕಾರ್ಕಳ ಬೆಳ್ಮಣ್ ನಿವಾಸಿ. 2019ರಲ್ಲಿ ನೆರೆಮನೆ ನಿವಾಸಿ ನಿವೃತ್ತ ಪಿಡಿಒ ಭರತಲಕ್ಷ್ಮಿ ಎಂಬವವರನ್ನು ಕೊಂದು ಮೃತದೇಹವನ್ನು ಬಾವಿಗೆಸೆದು ಚಿನ್ನಾಭರಣ ಲೂಟಿಗೈದಿದ್ದ. ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನಲ್ಲಿ ಹೊರಬಂದು ಮುಂಬೈ ಸೇರಿಕೊಂಡಿದ್ದ. ವಿಚಾರಣೆಗೆ ಕೋರ್ಟ್ಗೂ ಹಾಜರಾಗುತ್ತಿರಲಿಲ್ಲ.
ಅಲ್ಲದೆ, ಮುಂಬೈನಲ್ಲಿದ್ದುಕೊಂಡೇ ಫೇಸ್ಬುಕ್ನಲ್ಲಿ ಕರಾವಳಿಯ ಕ್ರಿಶ್ಚಿಯನ್ ಧರ್ಮದ ಅಂದಚೆಂದದ ಶ್ರೀಮಂತ ಮಹಿಳೆಯರನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದ. ವಿಧವೆಯರು, ಡಿವೋರ್ಸಿಗಳಂಥ ಒಂಟಿ ಮಹಿಳೆಯರ ಸಂಪರ್ಕ ಸಾಧಿಸುತ್ತಿದ್ದ. ಪ್ರೀತಿ, ಪ್ರೇಮವೆಂದು ಅವರ ಮನೆ ಸೇರಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಬಳಿಕ ಅವರ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದ.
ಬೈಟ್: ಅನುಪಮ್ ಅಗರ್ವಾಲ್, ಮಂಗಳೂರು ನಗರ ಪೊಲೀಸ್ ಆಯುಕ್ತ
ಮಾನದೊಂದಿಗೆ ಚಿನ್ನವನ್ನೂ ಕಳೆದುಕೊಂಡ ಮಹಿಳೆಯರು ಪೊಲೀಸರಿಗೆ ದೂರು ಕೊಡುತ್ತಿರಲಿಲ್ಲ. ಕರಾವಳಿಯ ನೂರಾರು ಮಹಿಳೆಯರಿಗೆ ಈತ ವಂಚಿಸಿದ್ದ. ಮಂಗಳೂರಿನ ಕುಲಶೇಖರ ನಿವಾಸಿ ಮಹಿಳೆಗೆ 2021ರಲ್ಲಿ ಇದೇ ರೀತಿ ವಂಚಿಸಿದ್ದ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರಿಗೆ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಇಸ್ರೇಲ್ನಲ್ಲಿ ವಾಸವಾಗಿದ್ದ ಅವರು ಈತನನ್ನು ಮದುವೆಯಾಗಲೆಂದೇ ಮಂಗಳೂರಿಗೆ ಬಂದಿದ್ದರು. ಇದನ್ನು ತನ್ನ ಸ್ನೇಹಿತೆಯೊಬ್ಬರಿಗೆ ತಿಳಿಸಿದ್ದರು.
ಆದರೆ, ಆಕೆ ಈತನಿಂದ ಮೋಸ ಹೋಗಿದ್ದರು. ಅದು ಗೊತ್ತಾಗಿ ಈತನಿಗೆ ಬುದ್ಧಿ ಕಲಿಸಬೇಕೆಂದು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯರೊಂದಿಗೆ ಸೇರಿದ ಪೊಲೀಸರು ಮಥಾಯೀಸ್ಗೆ ನಮ್ಮ ಬಳಿ ಚಿನ್ನಾಭರಣವಿದೆ. ಮನೆಯಲ್ಲಿ ಸೇಫ್ ಆಗಿರಲ್ಲ, ಬ್ಯಾಂಕ್ನಲ್ಲಿಡಬೇಕೆಂದು ಮಥಾಯೀಸ್ಗೆ ಕೇಳಿದ್ದಾರೆ. ಆತ ತಾನೇ ಅದನ್ನು ಭದ್ರವಾಗಿ ಇಟ್ಟುಕೊಂಡಿರುತ್ತೇನೆ ಎಂದಿದ್ದಾನೆ. ಮಹಿಳೆ ಒಪ್ಪಿದ್ದೇ ತಡ ಮುಂಬೈನಿಂದ ಮಂಗಳೂರಿಗೆ ಬಂದಿಳಿದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Kshetra Samachara
18/09/2024 10:44 pm