ಧಾರವಾಡ: 2019ರಲ್ಲಿ ನಡೆದಿದ್ದ ಕೊಲೆಯ ಆರೋಪಿಯೊಬ್ಬನಿಗೆ ಧಾರವಾಡದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2019ರ ಡಿಸೆಂಬರ್ನಲ್ಲಿ ಫಕ್ರುಸಾಬ್ ನದಾಫ್ ಎಂಬಾತನನ್ನು ಸಂತೋಷ ವಡ್ಡರ್ ಎಂಬಾತ ಆಸ್ಪತ್ರೆಗೆ ನುಗ್ಗಿ ಕೊಲೆ ಮಾಡಿದ್ದ. ನವಲಗುಂದದ ಅಪ್ರಾಪ್ತೆ ಮೇಲೆ ಫಕ್ರುಸಾಬ್ ನದಾಫ್ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನಿಗೆ ಧರ್ಮದೇಟು ನೀಡಿದ್ದ ಸ್ಥಳೀಯರು ನಂತರ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದರು.
ಧರ್ಮದೇಟಿನಿಂದ ಗಾಯಗೊಂಡಿದ್ದ ಫಕ್ರುಸಾಬ್ನನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಆಸ್ಪತ್ರೆಗೆ ನುಗ್ಗಿದ್ದ ಸಂತೋಷ ವಡ್ಡರ, ಫಕ್ರುಸಾಬ್ನ ಹೊಟ್ಟೆ ಮತ್ತು ಕುತ್ತಿಗೆಗೆ ಚಾಕು ಇರಿದಿದ್ದ. ತೀವ್ರವಾಗಿ ಗಾಯಗೊಂಡ ಫಕ್ರುಸಾಬ್ನನ್ನು ಅಲ್ಲಿಂದ ಕಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಫಕ್ರುಸಾಬ್ ಸಾವನ್ನಪ್ಪಿದ್ದ.
ಸಂತೋಷ ವಡ್ಡರ ಮಾಡಿದ ಈ ಕೊಲೆ ಸಂಬಂಧ ನವಲಗುಂದ ಠಾಣೆ ಪೊಲೀಸರು ದೋಷಾರೋಪಣ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿ, ವಾದ, ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ಅಪರಾಧಿಗೆ 10 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸರ್ಕಾರದ ಪರವಾಗಿ ಪ್ರಶಾಂತ ತೋರಗಲ್ ವಾದ ಮಂಡಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2024 07:07 pm