ಬೆಂಗಳೂರು : ಪೊಲೀಸ್ ವ್ಯಾನ್ನಲ್ಲಿ ಗಣೇಶನ ವಿಗ್ರಹ ಇರುವ ಫೋಟೋಗಳು, ವಿಡಿಯೋಗಳು ಭಾರೀ ಚರ್ಚೆಗೆ ಕಾರಣವಾಗಿವೆ. ಮಂಡ್ಯದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಕೋಮುಗಲಭೆಯಲ್ಲಿ ಕಲ್ಲು ತೂರಾಟಗಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿತರಾಗಿರುವ ಹಿಂದೂ ಸದಸ್ಯರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ವತಿಯಿಂದ ಟೌನ್ಹಾಲ್ ಎದುರು ಪ್ರತಿಭಟನೆ ನಡೆಸಲಾಯಿತ್ತು..
ಪ್ರತಿಭಟನಾಕಾರರು ಗಣಪತಿ ವಿಗ್ರಹವನ್ನು ಹಿಡಿದುಕೊಂಡೇ ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಪೊಲೀಸ್ ಬಸ್ಗೆ ಹತ್ತಿಸಿ, ಅವರ ಕೈಯಲ್ಲಿದ್ದ ಗಣೇಶ ವಿಗ್ರಹವನ್ನು ಹೊತ್ತುಕೊಂಡು ಪೊಲೀಸ್ ಜೀಪ್ನೊಳಗೆ ಇಟ್ಟುಕೊಂಡಿದ್ದಾರೆ. ಇದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಹೀಗಾಗಿ, ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಸುಮಾರು 40 ವ್ಯಕ್ತಿಗಳನ್ನು ಬಂಧಿಸಿದರು. ಈ ವೇಳೆ ಗಣೇಶನ ವಿಗ್ರಹವನ್ನು ಪ್ರತಿಭಟನಾಕಾರರಿಂದ ತೆಗೆದುಕೊಂಡು ಪೊಲೀಸ್ ವ್ಯಾನ್ನಲ್ಲಿ ಇರಿಸಲಾಯಿತು. ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪೊಲೀಸರು ಗಣೇಶನ ಮೂರ್ತಿಯನ್ನು ಪೊಲೀಸ್ ವಾಹನದಲ್ಲಿರಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಆದರೆ, ಪೊಲೀಸ್ ಜೀಪ್ನಲ್ಲಿ ಸುರಕ್ಷಿತವಾಗಿರಿಸಲಾಗಿದ್ದ ಗಣೇಶನ ವಿಗ್ರಹವನ್ನು ಪೊಲೀಸರೇ ವಿಸರ್ಜನೆ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುತ್ತಿದೆ ಮತ್ತು ಪರಿಸ್ಥಿತಿಯನ್ನು ತಪ್ಪಾಗಿ ನಿಭಾಯಿಸುತ್ತಿದೆ ಎಂದು ಹಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
PublicNext
16/09/2024 07:58 am