ನವಲಗುಂದ: ಪಟ್ಟಣದ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ಮಾಡುವುದರ ಮೂಲಕ ಹಾಗೂ ಸಂವಿಧಾನ ಪ್ರಸ್ತಾವನೆಯನ್ನು ಓದುವುದರ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಮಹಾವಿದ್ಯಾಲಯದ ಎನ್ಎಸ್ಎಸ್ ಅಧಿಕಾರಿ ಡಾ.ಎಂ.ಎನ್.ಹಾರೋಗೇರಿ ಪ್ರಜಾಪ್ರಭುತ್ವ ಕುರಿತು ಮಾತನಾಡುತ್ತಾ, ಕರ್ನಾಟಕ ಘನ ಸರ್ಕಾರ ನಮ್ಮ ಹೆಮ್ಮೆಯ ಸಂವಿಧಾನದ ಮಹತ್ವ ಮನವರಿಕೆ ಮಾಡಿಕೊಡಲು ಬೀದರ್ ನಿಂದ ಚಾಮರಾಜನಗರದವರಗೆ ಮಾನವ ಸರಪಳಿ ಮೂಲಕ ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸಲು ಕರೆ ಕೊಟ್ಟಿದೆ.
ಅದರ ನಿಮಿತ್ತ ಸರ್ಕಾರದ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ 2500 ಕಿ.ಮೀವರಗೆ ಮಾನವ ಸರಪಳಿ ಮೂಲಕ ಬನ್ನಿ ಪ್ರಜಾಪ್ರಭುತ್ವಕ್ಕಾಗಿ ಕೈ ಜೋಡಿಸೋಣ ಎಂಬ ಕಲ್ಪನೆಯೊಂದಿಗೆ ಗಿನ್ನಿಸ್ ರೆಕಾರ್ಡ್ಸ್ ಮಾಡುತ್ತಿರುವುದು ನಮ್ಮೆಲ್ಲರಿಗೂ ಅತೀವ ಸಂತೋಷ ತಂದಿದೆ.
ಇದರಲ್ಲಿ 25 ಲಕ್ಷ, ಜನರು ಭಾಗಿಯಾಗುತ್ತಿದ್ದರೆ, ಇದೇ ಸಂದರ್ಭದಲ್ಲಿ10 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವಿದ್ದು, ಇದೇ ಸಂದರ್ಭದಲ್ಲಿ 5000 ಪೀಠಿಕೆಗಳು ಬಳಕೆ ಮಾಡಿಕೊಳ್ಳಲಾಗಿದೆ. ಇದು ನಾವು ನಮ್ಮ ಪ್ರಜಾಪ್ರಭುತ್ವಕ್ಕೆ ಸಲ್ಲಿಸುವ ಒಂದು ಗೌರವದ ಜೊತೆಗೆ ಇದೊಂದು ಐತಿಹಾಸಿಕ ದಾಖಲೆ ಬರೆಯಲಿದೆ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ವಿ.ಬಡಿಗೇರ ನಮ್ಮ ಸಂವಿಧಾನ ನಮ್ಮ ಹೆಮ್ಮೆ ವಿಶ್ವದಲ್ಲೇ ಇದು ದೀರ್ಘವಾದ ಮತ್ತು ಪಾವಿತ್ರತೆಯಿಂದ ಕೂಡಿದ್ದು, ಪ್ರತಿಯೊಬ್ಬ ಪ್ರಜೆಗೂ ಆರ್ಥಿಕ, ಸಮಾಜಿಕ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಒದಗಿಸುತ್ತದೆ. ಭಾರತದ ಪ್ರಜಾಪ್ರಭುತ್ವವನ್ನು ಬುದ್ದನ ರಾಷ್ಟ್ರದ ಸಂವಿಧಾನವೆಂದು ಇಡೀ ವಿಶ್ವವೇ ಗೌರವಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ತದನಂತರ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯವರಿಗೆ ಸಂವಿಧಾನ ಪೀಠಿಕೆಯನ್ನು ಓದಿದರು. ಎಲ್ಲರೂ ಅದನ್ನು ಹೇಳಿ ಗೌರವ ಸೂಚಿಸಿದರು. ಎಲ್ಲರೂ ಮಾನವ ಸರಪಳಿ ನಿಂತು ಜೈ ಹಿಂದ್, ಜೈ ಕರ್ನಾಟಕ ಎಂದು ಘೋಷಣೆ ಕೂಗಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು, ಎನ್.ಎಸ್.ಎಸ್ ಸ್ವಯಂ ಸೇವಕರು ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೋಂಡಿದ್ದರು.
Kshetra Samachara
15/09/2024 03:00 pm