ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಯಿತು. ನಗರ, ಗ್ರಾಮೀಣ ಭಾಗಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಊರವರೆಲ್ಲ ಖುಷಿಯಿಂದ ಪಾಲ್ಗೊಂಡರು. ಕೆಲವೊಂದು ಕಡೆಗಳಲ್ಲಿ ಅದ್ಧೂರಿ ಶೋಭಾಯಾತ್ರೆಯ ಮೂಲಕ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಿತು.
ಆದರೆ, ಉಡುಪಿಯ ಪಟ್ಲದಲ್ಲಿ ಮಕ್ಕಳೇ ತಯಾರಿ ಮಾಡಿದ ಶ್ರೀಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಎಲ್ಲರ ಕಣ್ಮನ ಸೆಳೆದಿದೆ. ಹೌದು, ಉಡುಪಿಯ ಪಟ್ಲದ ಗಣಪತಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಯಾರಿಸಿದ ಗಣಪತಿ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇಂದು ಅದ್ಧೂರಿಯಾಗಿ ನಡೆಯಿತು.
ಕಳೆದ ವಾರ ಶಾಲೆಯಲ್ಲಿ ಮಕ್ಕಳಿಗಾಗಿ ಆವೆಮಣ್ಣಿನ ಕಲಾಕೃತಿಗಳ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಮಕ್ಕಳು ವಿವಿಧ ಗಣಪತಿ ವಿಗ್ರಹಗಳನ್ನು ತಯಾರಿಸಿದ್ದರು. ಆ ವಿಗ್ರಹಗಳ ಜಲಸ್ತಂಭನ ಶೋಭಾಯಾತ್ರೆ ವೈಭವದಿಂದ ಜರುಗಿತು. ಮಕ್ಕಳು ತಾವೂ ತಯಾರಿಸಿದ ಗಣೇಶ ಮೂರ್ತಿಗಳನ್ನು ಜೋಪಾನವಾಗಿ ಮೆರವಣಿಗೆ ಮೂಲಕ ತಂದು ಪಟ್ಲದ ಹೊಳೆಯಲ್ಲಿ ಜಲಸ್ತಂಭನ ಮಾಡಿ ಖುಷಿಪಟ್ಟರು.
Kshetra Samachara
09/09/2024 06:21 pm