ಮುಂಬೈ: ಹಿಂದಿ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಭಾರೀ ಜನಮನ್ನಣೆ ಗಳಿಸಿದ್ದ ನಟ ವಿಕಾಸ್ ಸೇಥಿ (48) ಹೃದಯ ಸ್ತಂಭನದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ ಅವರು ಭಾನುವಾರ (ಸೆಪ್ಟೆಂಬರ್ 8ರಂದು) ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರು ಪತ್ನಿ ಜಾನ್ವಿ ಮತ್ತು ಅವಳಿ ಮಕ್ಕಳನ್ನು ಅಗಲಿದ್ದಾರೆ.
ವಿಕಾಸ್ ಕೆಲ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ಅವರು ನಿರ್ಮಾಪಕರಾಗಿ ಸಿಕೆ ಪಿಕ್ಚರ್ಸ್ ಎನ್ನುವ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದರು ಎಂದು ವರದಿಯಾಗಿದೆ.
ಬಾಲಿವುಡ್ ಸಿನಿಮಾ, ಸೀರಿಯಲ್ಗಳಲ್ಲಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿದ್ದ ನಟ ವಿಕಾಸ್ ಸೇಥಿ ತಮ್ಮ 48ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ಕಲಾವಿದ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ', 'ಕಸೌತಿ ಜಿಂದಗಿ ಕಿ' ಹೀಗೆ ಮುಂತಾದ ಪ್ರಸಿದ್ಧ ಸೀರಿಯಲ್ಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ 'ದೀವಾನಾಪನ್', 'ಕಭಿ ಖುಷಿ ಕಭಿ ಗಮ್', 'ಓಪ್ಸ್', 'ಇಸ್ಮಾರ್ಟ್ ಶಂಕರ್' ಮುಂತಾದ ಸಿನಿಮಾಗಳಲೂ ಅಭಿನಯಿಸಿದ್ದಾರೆ.
ಮೂಲಗಳ ಪ್ರಕಾರ, ವಿಕಾಸ್ ಸ್ವಲ್ಪ ಸಮಯದಿಂದ ಆರ್ಥಿಕವಾಗಿ ತುಂಬಾನೇ ಸಮಸ್ಯೆಗಳನ್ನು ಎದುರಿಸುತ್ತಿದ್ದರಂತೆ. ಬಹಳ ದಿನಗಳಿಂದ ಕೆಲಸ ಕೂಡ ಸಿಗುತ್ತಿರಲಿಲ್ಲ. ಇಂಡಸ್ಟ್ರಿಯ ಹಲವು ಗೆಳೆಯರ ಸಂಪರ್ಕದಲ್ಲಿಯೂ ಇರಲಿಲ್ಲ. ದೂರದರ್ಶನ ಕಾರ್ಯಕ್ರಮಗಳಲ್ಲದೆ, ವಿಕಾಸ್ ಕರಣ್ ಜೋಹರ್ ಅವರ 'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ರಾಬಿ ಪಾತ್ರವನ್ನು ನಿರ್ವಹಿಸಿದ್ದರು.
ವಿಕಾಸ್ ಸೇಥಿ 90 ರ ದಶಕದ ಪ್ರಸಿದ್ಧ ನಟರಲ್ಲಿ ಒಬ್ಬರು. ಅವರು ಕಹಿನ್ ತೋ ಹೋಗಾ, ಸಸುರಲ್ ಸಿಮರ್ ಕಾ, ಗುಸ್ತಕ್ ದಿಲ್ ಮತ್ತು ಉತ್ತರನ್ನಂತಹ ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ವಿಕಾಸ್ ಯಾವುದೇ ಶೋಗಳಲ್ಲಿ ಪಾಲ್ಗೊಂಡಾಗ ತನ್ನ ಖಡಕ್ ಲುಕ್ ಮತ್ತು ಸದೃಢ ದೇಹದಿಂದ ಎಲ್ಲರ ಮನ ಗೆಲ್ಲುತ್ತಿದ್ದರಂತೆ.
PublicNext
08/09/2024 09:53 pm