ಹಾಸನ: ರಾಜ್ಯದಲ್ಲಿ ವಿರೋಧ ಪಕ್ಷಗಳು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಕುತಂತ್ರ ನಡೆಸುತ್ತಿವೆ ಎಂದು ಆರೋಪಿಸಿ ಇಂದು ಡಿಸಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ರಾಜಶೇಖರ್ ಮಾತನಾಡಿ, ಕೆಲವು ಕೋಮುವಾದಿ ಪಕ್ಷಗಳು ಆಳುವ ಸರ್ಕಾರದ ಬಗ್ಗೆ ಇಲ್ಲದ ತಂತ್ರಗಳನ್ನು ರೂಪಿಸಿ ಸರ್ಕಾರವನ್ನು ಕೆಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ಆಯ್ಕೆಯಾಗಿ ಬಂದಿರುವ ಸರ್ಕಾರವನ್ನು ಕೆಡವಲು ನಡೆಯುತ್ತಿರುವ ಪ್ರಯತ್ನದ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ಹಮ್ಮಿಕೊಂಡಿದೆ ಎಂದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜನರ ಅನೇಕ ಸಮಸ್ಯೆಗಳಿವೆ ವಿರೋಧ ಪಕ್ಷಗಳು ಅವುಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಬದಲಾಗಿ ಕೇವಲ ಸರ್ಕಾರವನ್ನು ಬೀಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಲಾರಂಭಿಸಿವೆ. ಕೆಲವು ಜನ ಪ್ರತಿನಿಧಿಗಳು ಬಹಿರಂಗವಾಗಿಯೇ ಸಾವಿರಾರು ಕೋಟಿ ಹಣ ಖರ್ಚಾದರೂ ಸರಿಯೇ ಶಾಸಕರನ್ನು ಖರೀದಿ ಮಾಡಿ ಹೊಸ ಸರ್ಕಾರ ರಚನೆ ಮಾಡುತ್ತೇವೆ ಎಂಬ ಮಾತುಗಳನ್ನ ಆಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಹಿಂದೆ ಕೂಡ ಅಪರೇಷನ್ ಕಮಲ ಮೂಲಕ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಇತರ ಸರ್ಕಾರಗಳಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಾರೆ. ಆದರೂ ಅದೇ ಆಲೋಚನೆಯಲ್ಲಿ ಇರುವ ವಿರೋಧ ಪಕ್ಷಗಳು ಕೂಡಲೇ ವಿರೋಧ ಪಕ್ಷಗಳು ತಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು ಇಲ್ಲವಾದರೆ ದಲಿತ ಸಂಘಟನೆಗಳು ಎಲ್ಲವೂ ಒಗ್ಗಟ್ಟಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
Kshetra Samachara
22/10/2024 02:11 pm