ಬೆಂಗಳೂರು : ಅವ್ರೆಲ್ಲ ಕಂಡ ಕಂಡ ಮನೆಗೆ ಕನ್ನ ಹಾಕ್ತಿದ್ರು. ಕೈ ಸಿಕ್ಕ ಚಿನ್ನ, ನಗದು ಕದ್ದು ಎಸ್ಕೇಪ್ ಆಗ್ತಿದ್ರು. ಕಳ್ಳತನ ಮಾಡಿ ಬಂದ ಹಣದಲ್ಲಿ ಸೀದಾ ಗೋವಾಗೆ ಹೋಗ್ತಿದ್ದ ಈ ಗ್ಯಾಂಗ್ ಕೆಸಿನೋದಲ್ಲಿ ಪಾರ್ಟಿ ಮಾಡ್ತಿದ್ರಂತೆ.
ಸದ್ಯ ಈ ಗ್ಯಾಂಗ್ ಅನ್ನು ಬೇಗೂರು ಪೊಲೀಸ್ರು ಬಂಧಿಸಿದ್ದಾರೆ. ಕಳ್ಳತನಕ್ಕೆ ಮುಂಚೆ ಗಾಂಜ ಎಳೆದು ಕಳ್ಳತನಕ್ಕೆ ಇಳಿಯುತ್ತಿದ್ದ ಇವ್ರು ಎಂಥಹ ಮನೆ ಆದ್ರೂ ಬಿಡ್ತಿರ್ಲಿಲ್ವಂತೆ. ಇದೇ ವರ್ಷ ಮಾರ್ಚ್ ನಲ್ಲಿ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಬಾಲ್ಕನಿ ಮೂಲಕ ಮನೆಗೆ ಕನ್ನ ಹಾಕಿ 74 ಗ್ರಾಮ್ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಮೊಬೈಲ್ ಫೋನ್ ಗಳನ್ನ ಕದ್ದು ಎಸ್ಕೇಪ್ ಆಗಿದ್ರು.
ಸತತ ಆರೇಳು ತಿಂಗಳ ಪರಿಶ್ರಮದಿಂದ ಕೊನೆಗೂ ಆರೋಪಿಗಳನ್ನ ಬಂಧಿಸುವಲ್ಲಿ ಬೇಗೂರು ಪೊಲೀಸ್ರು ಯಶಸ್ವಿಯಾಗಿದ್ದಾರೆ. ಅಂತರಾಜ್ಯ ಮನೆಗಳ್ಳರಾದ ಎಬಿನೈಸರ್, ಮಂಜುನಾಥ್, ನವೀನ, ಗುಣ, ಜೋಸೆಫ್ ನ ಬಂಧಿಸಿದ್ದಾರೆ. ಬಂಧಿತರಿಂದ 23 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣವನ್ನ ಸೀಜ್ ಮಾಡಿದ್ದಾರೆ.
ಮನೆಗಳ್ಳತನ ಮಾಡಿ ಬಂದ ದುಡ್ಡಲ್ಲಿ ಗೋವಾ ಬೀಚ್ ಹಾಗೂ ಕೆಸಿನೋದಲ್ಲಿ ಮೋಜು ಮಸ್ತಿ ಮಾಡ್ತಿದ್ದ ಇವರು ಕದ್ದ ಹಣದಲ್ಲಿ ಇಂತಿಷ್ಟು ಪಾಲನ್ನ ರಸ್ತೆಯಲ್ಲಿ ಹೋಗುವ ಭಿಕ್ಷುಕರಿಗೆ ಹಂಚ್ತಿದ್ರಂತೆ.
ಆರೋಪಿಗಳ ಬಂಧನದಿಂದಾಗಿ ವಿವಿಧ ಪೊಲೀಸ್ ಠಾಣೆಯ ಹತ್ತಕ್ಕೂ ಹೆಚ್ಚು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ.
PublicNext
22/10/2024 04:40 pm