ಬೆಂಗಳೂರು : ಕೆಂಗೇರಿ ಬಳಿಯ ಕೆರೆ ಬಳಿ ಆಟವಾಡಲು ಹೋಗಿದ್ದ ಅಣ್ಣ ತಂಗಿ ಶವವಾಗಿ ಪತ್ತೆಯಾಗಿದ್ದಾರೆ. ಕೆಂಗೇರಯ ಹರ್ಷ ಲೇಔಟ್ನ ಕೆರೆಯ ಹತ್ತಿರ ನಾಗಮ್ಮ ಎಂಬುವವರು ತನ್ನಿಬ್ಬರ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು. ಎರಡು ವರ್ಷಗಳ ಹಿಂದೆ ಗಂಡನನ್ನ ಕೂಡ ಕಳೆದುಕೊಂಡಿದ್ರು. ಬಿಬಿಎಂಪಿಯಲ್ಲಿ ಕಸ ವಿಂಗಡಣೆಯ ಕೆಲಸ. 13 ವರ್ಷದ ಮಗ ಸೀನು, 11 ವರ್ಷದ ಮಗಳು ಮಹಾಲಕ್ಷ್ಮಿಯೊಂದಿಗೆ ಜೀವನ ನಡೆಸುತ್ತಿದ್ರು.
ಆದ್ರೆ ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಇಬ್ಬರು ಮಕ್ಕಳು ಕಾಣದಂತಾಗಿದ್ದು, ತಾಯಿಗೆ ಆಕಾಶವೇ ಕಳಚಿ ಬಿದ್ದಂತಾಯ್ತು. ಸುತ್ತಮುತ್ತ ಹುಡುಕಿದಾಗ ಕೆರೆಯ ದಡದಲ್ಲಿ ಮಗನ ಬಟ್ಟೆಗಳು, ಚಿಕ್ಕ ಬಿಂದಿಗೆ ಬಿದ್ದಿತ್ತು. ಅದನ್ನ ನೋಡಿದ ತಕ್ಷಣ ಆಘಾತಗೊಂಡ ತಾಯಿ ಗೋಳಾಡಿದ್ದಾರೆ. ಆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಅಗ್ನಿಶಾಮಕ ದಳಕ್ಕೆ, ಪೊಲೀಸರಿಗೆ ಮಾಹಿತಿ ನೀಡಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಸತತ ಕಾರ್ಯಾಚರಣೆ ಬಳಿಕ ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆಯಾಗಿವೆ. ತನ್ನ ತಂಗಿಯನ್ನ ಕಾಪಾಡಲು ಹೋಗಿ ಅಣ್ಣನೂ ನೀರು ಪಾಲಾದ ದಾರುಣ ಘಟನೆ ನಡೆದು ಹೋಗಿದೆ.
PublicNext
22/10/2024 06:47 pm