ಉಡುಪಿ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಈವರೆಗೆ 5,378 ಕುಟುಂಬಗಳು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಅಳವಡಿಸಲು ನೊಂದಾಯಿಸಿಕೊಂಡಿವೆ ಎಂದು ಉಡುಪಿ ಜಿಲ್ಲೆಯ ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ವೇಳೆ ಅಧಿಕಾರಿಗಳು ಈ ಮಾಹಿತಿ ನೀಡಿದರು.
ಇವರಲ್ಲಿ 936 ಮಂದಿ ಸೋಲಾರ್ ಅಳವಡಿಕೆಗಾಗಿ ವೆಂಡರ್ಗಳನ್ನು ಆಯ್ಕೆ ಮಾಡಿಕೊಂಡಿದ್ದು, 439 ಫಲಾನುಭವಿಗಳ ಮನೆಗಳ ಮೇಲೆ ಸೂರ್ಯ ಘರ್ ಯೋಜನೆ ಈಗಾಗಲೇ ಅಳವಡಿಕೆಯಾಗಿದೆ. ಅಲ್ಲದೇ 386 ಕುಟುಂಬಗಳಿಗೆ ಸಾಲ ಮತ್ತು ಸಬ್ಸಿಡಿ ಖಾತೆಗೆ ಜಮೆಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ದಿನೇಶ್ ಉಪಾಧ್ಯ ಸಭೆಗೆ ಮಾಹಿತಿ ನೀಡಿದರು.
ಇತ್ತೀಚೆಗೆ ನಡೆದ ಸೂರ್ಯ ಘರ್ ಯೋಜನೆಯ ಕಾರ್ಯಾಗಾರದ ನಂತರ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ಗಮನಾರ್ಹ ಸಾಧನೆ ಮಾಡಬೇಕಿದೆ ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
Kshetra Samachara
07/02/2025 11:27 am