ಶಿವಮೊಗ್ಗ : ಜಿಲ್ಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ವ್ಯತ್ಯಯವಾಗದಂತೆ ಈಗಾಗಲೇ ಸರ್ಕಾರ ನಿಗಧಿಪಡಿಸಿದ ಸಮಯನುಸಾರ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಸಚಿವ ಮಧು ಬಂಗಾರಪ್ಪ ಮೆಸ್ಕಾಂ ಅಭಿಯಂತರರಿಗೆ ಸೂಚಿಸಿದರು.
ಶಿಕಾರಿಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಅಭಿವೃದ್ಧಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ಮಾತನಾಡಿದ ಅವರು ಶಿಕಾರಿಪುರ, ಶಿರಾಳಕೊಪ್ಪ ಮತ್ತು ಸೊರಬ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿರಂತರ ವ್ಯತ್ಯಾಯವಾಗುತ್ತಿರುವ ಕಾರಣ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದರ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ವಿದ್ಯುತ್ ನ್ನು ಒದಗಿಸುವಂತೆ ಹಾಗೂ ಯಾವುದೇ ದೂರಗಳು ಬಾರದಂತೆ ನೋಡಿಕೊಳ್ಳಬೇಕು.
ಮಾತ್ರವಲ್ಲ ಈ ಸಂಬಂಧ ಬರುವ ಸಾರ್ವಜನಿಕರ ಅಹವಾಲುಗಳಿಗೆ ಸಕಾಲಿಕವಾಗಿ ಸ್ಪಂದಿಸುವಂತೆ ಸೂಚಿಸಿದರು. ತಾಲೂಕಿನ ಆಯ್ದ ಭಾಗಗಳಲ್ಲಿ ಟ್ರಾನ್ಸ್ಫರ್ಮರ್ ಗಳು ಹಾಳಾಗಿದ್ದು ದುರಸ್ತಿ ಮಾಡುವ ಬಗ್ಗೆ ಹಾಗೂ ಅಗತ್ಯವಿರುವೆಡೆಗಳಲ್ಲಿ ಹೊಸ ಟ್ರಾನ್ಸ್ಫರ್ಮರ್ ಗಳನ್ನು ಅಳವಡಿಸಬೇಕು. ಅದಕ್ಕಾಗಿ ತಾವು ತಮ್ಮ ಮೇಲಾಧಿಕಾರಿಗಳಿಗೆ ಸಲ್ಲಿಸಿದ ಪ್ರಸ್ತಾವನೆಯ ಪ್ರತಿಯನ್ನು ಕೊಟ್ಟಲ್ಲಿ ಕ್ರಮ ಕೈಗೊಳ್ಳಲಾಗುವುದು.
ವಿದ್ಯುತ್ ಸಮಸ್ಯೆಯ ಇತ್ಯರ್ಥಕ್ಕೆ ಆದ್ಯತೆಯ ಮೇಲೆ ಕ್ರಮ ವಹಿಸುವಂತೆಯೂ ಸೂಚಿಸಿದ ಅವರು ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಮೆಸ್ಕಾಂನ ವ್ಯವಸ್ಥಾಪಕರೊಂದಿಗೆ ಚರ್ಚಿಸಲಾಗುವುದು ಎಂದರು.
Kshetra Samachara
05/02/2025 07:52 pm