ಮಂಡ್ಯ : ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳದಿಂದ ಬೇಸತ್ತು ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದ ಪ್ರೇಮ ಆತ್ಮಹತ್ಯೆ ಮಾಡಿಕೊಂಡಿದ್ರು. ಅವರ ಮಗ ತಾಯಿ ಸಾವಿನಿಂದ ಆಘಾತಕ್ಕೊಳಗಾಗಿ ತಾನೂ ಸಹ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಜರುಗಿದೆ.
ಪ್ರೇಮ ಅಂದಾನಯ್ಯ ದಂಪತಿ ಪುತ್ರ 31 ವರ್ಷದ ಕೆ ಎ ರಂಜಿತ್ ನ ಶವ ಶನಿವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಹಲಗೂರು ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ಬುಧವಾರ 29 ರಂದು ತಾಯಿ ಪ್ರೇಮ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿ 30ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ತಾಯಿಯ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ರಂಜಿತ್ ಅಂದಿನಿಂದಲೂ ನಾಪತ್ತೆಯಾಗಿದ್ದು ತಾಯಿಯ ಅಂತ್ಯಸಂಸ್ಕಾರಕ್ಕೂ ಬಂದಿರಲಿಲ್ಲ ಎಂದು ಗೊತ್ತಾಗಿದೆ.
ಗಾಬರಿಗೊಳಗಾದ ಕುಟುಂಬದವರು ಈತನಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಈತ ಶವವಾಗಿ ಹಲಗೂರು ಕೆರೆಯಲ್ಲಿ ಪತ್ತೆಯಾಗಿದ್ದಾನೆ. ಬಹುಶಃ ತಾಯಿ ಸಾವಿನ ಸುದ್ದಿ ಕೇಳಿ ಆಘಾತದಿಂದ ಗುರುವಾರವೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎನ್ನಲಾಗಿದ್ದು, ಇದರೊಂದಿಗೆ ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ ಒಂದು ಕುಟುಂಬವೇ ಬಲಿಯಾದಂತಾಗಿದೆ. ರಂಜಿತ್ ಅವರ ಒಂದು ಕಾಲಿಗೆ ಗ್ಯಾಂಗ್ರಿನ್ ಆಗಿದ್ದರೂ ಸಹ ತಾಯಿಯ ಸಂಕಷ್ಟಕ್ಕೆ ಹೆಗಲು ಕೊಡಲು ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
01/02/2025 04:50 pm