ತುಮಕೂರು : ನಿಷೇಧಿತ ಕೀಟನಾಶಕವನ್ನು ಲೇಬಲ್ನಲ್ಲಿ ನಮೂದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಕೀಟನಾಶಕ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಗೂಳೂರಿನಲ್ಲಿರುವ ಮಾನಸ ಆಗ್ರೋ ಸೆಂಟರ್ ಕೀಟನಾಶಕ ಮಳಿಗೆಯಲ್ಲಿ ಸೀಬೆ, ಜೋಳ ಮತ್ತು ಮರಗೆಣಸು ಬೆಳೆಗಳಿಗೆ ನಿಷೇಧ ಮಾಡಿದ್ದರೂ ಸಹ ಲೇಬಲ್ನಲ್ಲಿ ನಮೂದಿಸಿ ಕೆಲವು ಕೀಟನಾಶಕವನ್ನು ಉತ್ಪಾದನೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ಮಾಡಿ ಸುಮಾರು 5428 ರೂ. ಮೌಲ್ಯದ ಕೀಟನಾಶಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಈ ಹಿಂದೆ ಕ್ಷೇತ್ರ ಭೇಟಿಯಲ್ಲಿ ಸದರಿ ಅಂಗಡಿ ಮಳಿಗೆಯನ್ನು ನಿಯಮಾನುಸಾರ ಪರಿಶೀಲಿಸಿದಾಗ, ನಿಯಮವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಸದರಿ ಕೀಟನಾಶಕ ದಾಸ್ತಾನಿಗೆ ಮಾರಾಟ ತಡೆ ಆದೇಶ ಜಾರಿ ಮಾಡಿ ಸಂಬಂಧಪಟ್ಟ ಮಾರಾಟಗಾರರಿಗೆ, ಸರಬರಾಜುದಾರರಿಗ ಹಾಗೂ ಉತ್ಪಾದಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ದಾಳಿಯಲ್ಲಿ ಕೃಷಿ ಇಲಾಖೆ ಜಾರಿದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ, ಅಶ್ವತ್ಥ್ನಾರಾಯಣ್, ತಾಂತ್ರಿಕ ಸಹಾಯಕರಾದ ಯಲ್ಲಪ್ಪ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
Kshetra Samachara
29/01/2025 03:36 pm