ಮುಲ್ಕಿ:ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟ ಅ.ಗೌ. ಕಿನ್ನಿಗೋಳಿ ಅವರ ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬಂದು ಎಲ್ಲರೂ ಓದುವಂತಾಗಬೇಕು. ನೂರು ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಬಿ. ಜನಾರ್ದನ ಭಟ್ಟರಿಗೆ ಸರಕಾರ ಹಾಗೂ ಸಾರ್ವಜನಿಕ ವಲಯದಿಂದ ಹೆಚ್ಚಿನ ಗೌರವಗಳು ಸಿಗುವಂತಾಗಲಿ ಎಂದು ಕಸಾಪ ಮಾಜೀ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಅವರು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಕಿನ್ನಿಗೋಳಿಯ ಶ್ರೀಗಂಧ ನಿವಾಸದಲ್ಲಿ ಆಯೋಜಿಸಿದ ಸಾಹಿತಿ ಅ.ಗೌ. ಕಿನ್ನಿಗೋಳಿ ಇವರ ಶತಮಾನೋತ್ಸವ ಆಚರಣೆ ಹಾಗೂ ಖ್ಯಾತ ಸಾಹಿತಿ ಬಿ. ಜನಾರ್ದನ ಭಟ್ಟರ 99, 100, 101ನೆಯ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ. ಕನ್ನಡ ಶಾಲೆಗಳನ್ನು ಉಳಿಸಿ. ಇಲ್ಲದಿದ್ದರೆ ಕನ್ನಡಕ್ಕೆ ಉಳಿವಿಲ್ಲ. ಕನ್ನಡವೇ ಗೊತ್ತಿಲ್ಲದಿದ್ದರೆ ನಾಳೆ ಸಾಹಿತ್ಯ ಓದುವವರಿಲ್ಲದ ಸ್ಥಿತಿ ಬರುತ್ತದೆ ಎಂದು ಸರಕಾರಕ್ಕೂ ಪತ್ರ ಬರೆದಿದ್ದೇನೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಹಾಗೂ ಸಾಹಿತ್ಯಕ್ಕೆ ತೊಂದರೆ ಇದೆ ಎಂದು ಪುನರೂರು ಹೇಳಿದರು.
ಜನಾರ್ದನ ಭಟ್ಟರ 99ನೆಯ ಕೃತಿ ಕಪ್ಪೆ ಹಿಡಿಯುವವನು ಕಥಾ ಸಂಕಲನವನ್ನು ಸಾಹಿತಿ ಮೂಡುಬಿದ್ರೆ ಬಿ. ರಾಮಚಂದ್ರ ಆಚಾರ್ಯ, 100ನೆಯ ಕೃತಿ ಕನ್ನಡ ಕಾದಂಬರಿ ಮಾಲೆಯನ್ನು ಡಾ. ಹರಿಕೃಷ್ಣ ಪುನರೂರು 101ನೆಯ ಕೃತಿ ಹೊಸನೋಟಗಳ ಸಮಾಜ ವಿಮರ್ಶಕ ಅ.ಗೌ.ಕಿನ್ನಿಗೋಳಿ ಕೃತಿಗಳನ್ನು ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಬಿಡುಗಡೆಗೊಳಿಸಿದರು.
ಅ.ಗೌ.ಕಿನ್ನಿಗೋಳಿ ಅವರ ಸಂಸ್ಮರಣೆ ಮಾತುಗಳನ್ನಾಡಿದ ಜನಾರ್ದನ ಭಟ್ ತನ್ನ ಊರಿನ ಹೆಸರಿನ್ನು ಇಟ್ಟುಕೊಂಡು ಪ್ರಸಿದ್ಧರಾದ ಅಚ್ಯುತ ಗೌಡ ಅವರ ಕಾವ್ಯಗಳು ಕಾದಂಬರಿಗಳು ಸಾಹಿತ್ಯವಲಯದಲ್ಲಿ ದೊಡ್ಡ ಹೆಸರನ್ನು ತಂದುಕೊಟ್ಟಿವೆ ಎಂದರು. ತನ್ನ ಕಾದಂಬರಿ ಮಾಲೆ ಕೃತಿಯಲ್ಲಿ ಕನ್ನಡ ಸಾಹಿತ್ಯದ ನೂರು ಕಾದಂಬರಿಗಳ ಕುರಿತು ಬರೆಯಲಾಗಿದೆ ಎಂದರು.
ಡಾ. ಎಂಪಿ. ಶ್ರೀನಾಥ್ ಮಾತನಾಡಿ ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ. ಮನೆಮನೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಬೆಳಕಿಗೆ ಬಾರದ ಸಾಹಿತಿಗಳನ್ನು ಗುರುತಿಸುವ ಕಾರ್ಯವನ್ನು ಮಾಡಲಿದೆ ಎಂದರು.
ಅ.ಗೌ.ಕಿನ್ನಿಗೋಳಿಯವರ ಪುತ್ರಿ ಜಯಂತಿ. ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ. ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ವೇದಿಕೆಯಲ್ಲಿದ್ದರು. ಅಗೌ ಕಿನ್ನಿಗೋಳಿಯರ ಬಗ್ಗೆ ಬಾಲಕೃಷ್ಣ ಉಡುಪ, ಪಾಂಡುರಂಗ ಭಟ್ ಕಟೀಲು ಹೇಳಿದರು. ಆಶ್ವೀಜಾ ಉಡುಪ ಅಚ್ಯುತ ಗೌಡರ ಕಾವ್ಯಗಾಯನ ಮಾಡಿದರು.
ಕಸಾಪ ಕಾರ್ಯದರ್ಶಿ ಜೊಸ್ಸಿ ಪಿಂಟೋ ಸ್ವಾಗತಿಸಿದರು. ಪ್ರಕಾಶ್ ಆಚಾರ್ ನಿರೂಪಿಸಿದರು.
Kshetra Samachara
21/10/2024 10:09 am