ಹುಬ್ಬಳ್ಳಿ: ಸ್ವರ್ಣಾ ಗ್ರೂಪ್ ಆಫ್ ಕಂಪನಿ ಅಂದರೆ ಉದ್ಯೋಗ ನೀಡುವ ಮೂಲಕ ಸಾವಿರಾರು ಕುಟುಂಬಕ್ಕೆ ಅನ್ನ ಹಾಕುವ ಸಂಸ್ಥೆ. ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ ಅಂದರೇ ಅವರೊಬ್ಬ ಉದ್ಯಮಿ ಮಾತ್ರವಲ್ಲದೆ ಧಾರ್ಮಿಕ ಅನುಭವಿಕರು. ಉದ್ಯಮದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಎಷ್ಟು ಮುಂದಿದ್ದಾರೋ ಅದೇ ರೀತಿ ಧಾರ್ಮಿಕ ಕಾರ್ಯದಲ್ಲಿ ಎತ್ತಿದ ಕೈ. ಈ ನಿಟ್ಟಿನಲ್ಲಿ ತಮ್ಮ ಫ್ಯಾಕ್ಟರಿಯಲ್ಲಿ ಸ್ವರ್ಣ ವಿನಾಯಕನ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ಚಳಮಟ್ಟಿ ಗ್ರಾಮದ ಹೊರವಲಯದಲ್ಲಿರುವ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಫ್ಯಾಕ್ಟರಿಯ ಕ್ಯಾಂಪಸ್ ನಲ್ಲಿ ಸುಮಾರು 11ವರ್ಷಗಳ ಹಿಂದೆಯೇ ವಿಘ್ನ ನಿವಾರಕ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ದೇವಸ್ಥಾನಕ್ಕೆ ಹನ್ನೊಂದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸಿದ್ದು, ನಿಜಕ್ಕೂ ಕುಟುಂಬದ ಒಳಿತಿಗಾಗಿ ಮಾತ್ರವಲ್ಲದೆ ಲೋಕ ಕಲ್ಯಾಣಕ್ಕಾಗಿ ಇಂತಹದೊಂದು ಧಾರ್ಮಿಕ ಕಾರ್ಯ ಮಾಡುತ್ತಿದ್ದಾರೆ. ರೈಲ್ವೆ ಗುತ್ತಿಗೆ ಕಾರ್ಯಕ್ಕೆ ಬೇಕಾದ ಸ್ಲೀಪರ್ ಬಡ್ಡಿ, ಫೀವರ್ಸ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸುವ ಬಹುದೊಡ್ಡ ಫ್ಯಾಕ್ಟರಿಯಲ್ಲಿ ಇಂತಹದೊಂದು ಧಾರ್ಮಿಕ ಆಚರಣೆಯ ಮೂಲಕ ಮಹತ್ವದ ಸಂದೇಶ ರವಾನೆ ಮಾಡಿದ್ದಾರೆ.
ಇನ್ನೂ ಸ್ವರ್ಣ ವಿನಾಯಕ ದೇವರ ಹನ್ನೊಂದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೊದಲ ದಿನ ಅಶ್ಲೇಶಾ ಬಲಿ, ಮೃತ್ಯುಂಜಯ ಹೋಮ ಹಾಗೂ ಎರಡನೇ ದಿನ ದುರ್ಗಾ ಹೋಮ ಹಾಗೂ ಗಣ ಹೋಮದ ಮೂಲಕ ವಿಶೇಷ ಪೂಜೆ ನೆರವೇರಿಸಲಾಗಿದೆ. ಭಕ್ತರಿಗೆ, ಸಿಬ್ಬಂದಿಗೆ ಹಾಗೂ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದು, ಲೋಕ ಕಲ್ಯಾಣಕ್ಕಾಗಿ ಡಾ.ವಿ.ಎಸ್.ವಿ ಪ್ರಸಾದ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಡಾ.ವಿ.ಎಸ್.ವಿ ಪ್ರಸಾದ ಅವರ ಕಾರ್ಯಕ್ಕೆ ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದು, ವಿ.ಎಸ್.ವಿ ಪ್ರಸಾದ ಅವರ ಧಾರ್ಮಿಕತೆಯನ್ನು ಕೊಂಡಾಡಿದ್ದಾರೆ.
ಒಟ್ಟಿನಲ್ಲಿ ಬಹುದೊಡ್ಡ ಉದ್ಯಮದ ನಡುವೆಯೂ ದೇವರ ಪೂಜೆ ಪುನಸ್ಕಾರದ ಮೂಲಕ ಸಿಬ್ಬಂದಿ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಸ್ವರ್ಣ ವಿನಾಯಕನ ಪೂಜೆ ಮೂಲಕ ನಾಡಿನ ಸಮಸ್ತ ಜನರ ಕಲ್ಯಾಣಕ್ಕೆ ಸಂಕಲ್ಪ ಮಾಡಿರುವುದು ಡಾ.ವಿ.ಎಸ್.ವಿ ಪ್ರಸಾದ ಅವರ ಸಾಮಾಜಿಕ ಕಾಳಜಿಯನ್ನು ತೋರುತ್ತದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/10/2024 05:27 pm