ಧಾರವಾಡ: ಇಂದು ಬೆಳಗಿನಜಾವ ಲಾರಿ ಮತ್ತು ಆಟೊ ಮಧ್ಯೆ ಅಪಘಾತ ಸಂಭವಿಸಿ ಆಟೊದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್ ಎಂಬ ಬಾಲಕ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾನೆ.
ಒಟ್ಟು ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದಂತಾಗಿದ್ದು, ಇನ್ನಿಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಧಾರವಾಡದ ಸಂಪಿಗೆ ನಗರದ ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತವಾಗಲು ಬಿಡಾಡಿ ದನಗಳೇ ಕಾರಣ ಎಂದು ಸ್ಥಳೀಯರು ಧಾರವಾಡದ ಸಂಪಿಗೆನಗರದ ಮೂಲಕ ಹಾದು ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬಿಡಾಡಿ ದನಗಳು ಧಾರವಾಡದಲ್ಲಿ ಹೆಚ್ಚಾಗಿವೆ. ಇವುಗಳ ಮೇಲೆ ಪಾಲಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಬಿಡಾಡಿ ದನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಇಂದು ಬೆಳಗಿನಜಾವ ಅಪಘಾತ ಸಂಭವಿಸಿದೆ. ಕೂಡಲೇ ಮಹಾನಗರ ಪಾಲಿಕೆ ಬಿಡಾಡಿ ದನಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕೆಲಕೇರಿ, ಸಂಪಿಗೆನಗರದ ಜನತೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಶಾಸಕ ಅರವಿಂದ ಬೆಲ್ಲದ ಕೂಡ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದರು. ಅಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದರು.
ಪಾಲಿಕೆ ಅಧಿಕಾರಿಗಳು, ಕೆಎಸ್ಆರ್ಟಿ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಳೀಯರು ಮನವಿಗೆ ಸ್ಪಂದಿಸಿದ ನಂತರವೇ ಸ್ಥಳೀಯರು ತಮ್ಮ ಪ್ರತಿಭಟನೆ ಕೈಬಿಟ್ಟರು. ಸದ್ಯ ಇಂದು ನಡೆದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
Kshetra Samachara
20/10/2024 04:26 pm