ಮಂಗಳೂರು: ರಾಜ್ಯದ ಕಾಂಗ್ರೆಸ್ ಆಡಳಿತ ಪ್ರಸ್ತುತ ಆಂತರಿಕ ಕಲಹದಿಂದ `ಆಕ್ಸಿಜನ್' ವ್ಯವಸ್ಥೆಯಲ್ಲಿದೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣ ಲಜ್ಜೆಗೆಟ್ಟ ಹಾಗೂ ನೀತಿಗೆಟ್ಟ ಸರ್ಕಾರದ ದೊಡ್ಡ ಸಾಧನೆ ಎಂದು ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ವಿಧಾನ ಪರಿಷತ್ ಉಪಚುನಾವಣೆಯ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಕದಡಿ ಹೋಗಿದೆ. ಗ್ರಾಮ ಮಟ್ಟದ ವಿಎ ಯಿಂದ ಹಿಡಿದು ವಿಧಾನಸಭಾ ಕಚೇರಿ ತನಕ ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ, ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಮುಖ್ಯಮಂತ್ರಿ ಪದವಿಗಾಗಿ `ಸಂಗೀತ ಕುರ್ಚಿ' ನಡೆಸುವುದಷ್ಟೇ ರಾಜ್ಯದ ಆಡಳಿತದಲ್ಲಿ ಕಂಡುಬರುತ್ತಿದೆ ಎಂದು ಹೇಳಿದರು.
ಬೊಮ್ಮಾಯಿ ಸರ್ಕಾರವನ್ನು ಕಾಂಗ್ರೆಸ್ ಮುಖಂಡರು 40% ಸರ್ಕಾರ ಎಂದು ಹೇಳುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ ಕಾಂಗ್ರೆಸ್ ನ ರಾಜ್ಯ ಸರ್ಕಾರವನ್ನು 80% ಸರ್ಕಾರ ಎಂದು ಕರೆಯಬೇಕಾಗಿದೆ. ಆ ಮಟ್ಟಿನ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಅನುದಾನವೇ ಇಲ್ಲ. ಬೊಮ್ಮಾಯಿ ಸರ್ಕಾರ ನೀಡಿದ ಅನುದಾನದ ಕಾಮಗಾರಿ ಮಾತ್ರ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ರಾಷ್ಟ್ರ ವಿರೋಧಿಗಳ ಪರವಾಗಿ ಕೆಲಸ ಮಾಡುತ್ತಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗುತ್ತಿದೆ, ಜೈನ ಮುನಿ ಹತ್ಯೆ, ಹುಬ್ಬಳ್ಳಿ ಗಲಭೆ ಪ್ರಕರಣಗಳಲ್ಲಿ ಇದು ಸಾಬೀತಾಗಿದೆ. ಕಾಂಗ್ರೆಸ್ ನಡೆ ರಾಷ್ಟ್ರದ್ರೋಹಿಗಳಿಗೆ ವಿಶ್ವಾಸ, ಶಕ್ತಿ ತುಂಬುವತ್ತ ಸಾಗುತ್ತಿದೆ. ಕಾಂಗ್ರೆಸ್ ಬೆಂಬಲಿಸುವ ಜನಪ್ರತಿನಿಧಿಗಳೂ ಸರ್ಕಾರದ ವಿರುದ್ಧ ಕೋಪ ವ್ಯಕ್ತಪಡಿಸುವ ಸ್ಥಿತಿಗೆ ಬಂದಿದ್ದಾರೆ. ಅಂತಹ ದುರಾಡಳಿತ ಕಾಂಗ್ರೆಸ್ ನೀಡುತ್ತಿದೆ ಎಂದು ನಳಿನ್ ಆಕ್ರೋಶ ವ್ಯಕ್ತಪಡಿಸಿದರು.
PublicNext
19/10/2024 10:23 pm