ಮಂಗಳೂರು: ಗಡಿ ಭಾಗದ ಕೇರಳ ರಾಜ್ಯದ ಮಂಜೇಶ್ವರ ವಿಧಾನಸಭೆಯ ಚುನಾವಣಾ ತಕರಾರು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ ಒಟ್ಟು 6 ಮಂದಿಯನ್ನು ದೋಷಮುಕ್ತಗೊಳಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೆ.ಸುರೇಂದ್ರನ್ ಸೇರಿದಂತೆ ಇತರ ಆರು ಮಂದಿಯನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿ ನೀಡಿದ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಹೈಕೋರ್ಟ್ಗೆ ರಿವಿಶನ್ ಪಿಟಿಶನ್ ಸಲ್ಲಿಸಿತ್ತು. ಮಾತ್ರವಲ್ಲ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸಬೇಕೆಂದೂ ಅರ್ಜಿಯಲ್ಲಿ ಸರಕಾರ ಕೋರಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ ನ ನ್ಯಾಯಮೂರ್ತಿ ಕೆ.ಬಾಬು ತೀರ್ಪಿಗೆ ತಡೆಯಾಜ್ಞೆ ಹೊರಡಿಸಿದ್ದಾರೆ.
ಈ ಅರ್ಜಿಯ ಕುರಿತಾದ ಮುಂದಿನ ಪರಿಶೀಲನೆಯನ್ನು ಹೈಕೋರ್ಟ್ ನ.8ಕ್ಕೆ ಮುಂದೂಡಿದೆ. 2021ರಂದು ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುಂದರರಿಗೆ 2.5ಲಕ್ಷ ರೂ., ಮೊಬೈಲ್ ಫೋನ್ ನೀಡಿ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಎಂದು ಆರೋಪಿಸಿ ಇದೇ ಕ್ಷೇತ್ರದಲ್ಲಿ ಅಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ ಸೇರಿದಂತೆ ಆರು ಮಂದಿ ವಿರುದ್ಧ ಎಡರಂಗದ ಅಭ್ಯರ್ಥಿ ವಿ.ವಿ.ರಮೇಶನ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಮ್ ಬ್ರಾಂಚ್ ಗೆ ವಹಿಸಿಕೊಡಲಾಗಿತ್ತು. ಕೈಮ್ ಬ್ರಾಂಚ್ ತನಿಖೆ ನಡೆಸಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಆದರೆ ತಮ್ಮ ವಿರುದ್ಧದಾಖಲಿಸಲಾಗಿರುವ ಪ್ರಕರಣ ವಾಸ್ತವರಹಿತವಾದುದೆಂದೂ, ಆದುದ್ದರಿಂದ ತಮ್ಮ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಸುರೇಂದ್ರನ್ ಸೇರಿದಂತೆ ಆರು ಮಂದಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸುರೇಂದ್ರನ್ ಸಹಿತ ಆರು ಮಂದಿಯನ್ನು ದೋಷಮುಕ್ತಗೊಳಿಸಿ ಅ.5ರಂದು ತೀರ್ಪು ನೀಡಿತ್ತು. ಅದರ ವಿರುದ್ಧ ಸರಕಾರ ಹೈಕೋರ್ಟ್ಗೆ ರಿವಿಶನ್ ಸಲ್ಲಿಸಿದೆ.
Kshetra Samachara
18/10/2024 06:01 pm